ಗದಗ : ಇಷ್ಟು ದಿನ ನಾನು ಸುಮ್ಮನಿದ್ದೆ ಅಂತಾ ಮಾತನಾಡುತ್ತಿದ್ದಾರೆ… ಇಲ್ಲಿಯವರೆಗೆ ಒಂದು ಲೆಕ್ಕ ಇನ್ಮುಂದೆ ಬೇರೆಯೇ ಲೆಕ್ಕ ನೋಡಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮತ್ತೊಮ್ಮೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದರು.
ಇತ್ತೀಚೆಗೆ ವಿಜಯೇಂದ್ರ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಹಾಗೂ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಿಡಿದೆದ್ದು ಗುಡುಗಿದ್ದ ರಾಮುಲು ಅವರ ಮನೆಗೆ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜೀವ್ ಇಂದು ಭೇಟಿ ಮಾಡಿ ರಹಸ್ಯ ಸಭೆ ನಡೆಸಿದರು.
ಬಳಿಕ ಪ್ರತಿಕ್ರಿಯೆ ನೀಡಿದ ರಾಮುಲು, ದೆಹಲಿಗೆ ಹೋಗಿ ಎಲ್ಲ ವಿಚಾರವನ್ನು ರಾಷ್ಟ್ರ ನಾಯಕರಿಗೆ ತಿಳಿಸುತ್ತೇನೆ. ಇನ್ನು ಮುಂದೆ ನಾನು ಸುಮ್ಮನೇ ಕೂರುವವನಲ್ಲ. ನಾನೂ ಯಾವುದೇ ಮುಲಾಜಿಲ್ಲದೇ ಮಾತನಾಡುತ್ತೇನೆ.
ಪಕ್ಷಕ್ಕೆ ಡ್ಯಾಮೇಜ್ ಆಗಬಾರದು ಅಂತಾ ಸುಮ್ಮನಿದ್ದೆ ಅಷ್ಟೇ. ಇನ್ಮುಂದೆ ನನ್ನನ್ನು ಕೆಣಕಿದರೆ, ಅಪಮಾನಿಸಿದರೆ ಬಾಯಿಮುಚ್ಚಿಕೊಂಡಿರುವ ಪ್ರಶ್ನೆಯೇ ಇಲ್ಲ. ಬೀದಿಗೆ ಇಳಿದು ಮಾತನಾಡುತ್ತೇನೆ ಎಂದು ಕಿಡಿನುಡಿದರು.
ಈ ಎಲ್ಲವೂ ಸರಿ ಹೋಗಬೇಕಾದರೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳಬೇಕು. ಹೀಗಾಗಿ ಭೇಟಿ ಮಾಡಿ ಎಲ್ಲವೂ ಹೇಳಿ ಬರುತ್ತೇನೆ ಎಂದರು. ರಾಮುಲು ಪಕ್ಷ ಬಿಟ್ಟು ಹೋಗಲ್ಲ ಎಂಬ ಸಂಗತಿ ಇಡೀ ರಾಜ್ಯಕ್ಕೆ ಗೊತ್ತಿದೆ.
ನನಗೆ ಪಕ್ಷ ಬಿಟ್ಟು ಹೋಗಬೇಕು ಅಂತಾ ಅನಿಸಿದರೆ ನನ್ನನ್ನು ಯಾರಾದರೂ ತಡೆಯೋಕೆ ಆಗುತ್ತಾ? ನನ್ನನ್ನು ಜೈಲಿಗೆ ಹಾಕುತ್ತಾರಾ? ಪಕ್ಷ ಬಿಡುವ ಮಾತು ನನ್ನ ಮನಸ್ಸಿಗೆ ಬಂದಿಲ್ಲವಷ್ಟೇ ಎಂದು ಹೇಳಿದರು.
ರಾಮುಲು ಅವರನ್ನು ಸಮಾಧಾನಪಡಿಸಲು ಬಂದು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ರಾಜೀವ್ ಅವರು ತಮ್ಮ ಕಾರು ಹತ್ತಿ ಹೊರಟು ಹೋದರು.




