ಬೆಂಗಳೂರು : ಸಿಎಂ ಅಧಿಕೃತ ಕಾವೇರಿ ವಸತಿಗೃಹವನ್ನು ರೂ.2.65 ಕೋಟಿ ವೆಚ್ಚದಲ್ಲಿ ನವೀಕರಣಕ್ಕೆ ಮುಂದಾಗಿರುವ ಸಿದ್ದರಾಮಯ್ಯ ಅವರೇ, ಜನರು ಬೆವರು ಹರಿಸಿ ಕಟ್ಟಿದ ತೆರಿಗೆ ಹಣವನ್ನು ಈ ರೀತಿ ದುಂದುವೆಚ್ಚ ಮಾಡುವುದು ಯಾವ ರೀತಿಯ ಸಮಾಜವಾದ ಎಂದು ಜೆಡಿಎಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟಿಸಿ, 2023ರ ನವೆಂಬರ್ ತಿಂಗಳಲ್ಲಿ ಕಾವೇರಿ ನಿವಾಸದ ವೈಭವಕ್ಕೆ ಬರೋಬ್ಬರಿ ರೂ.3 ಕೋಟಿ ಖರ್ಚು ಮಾಡಿದ್ದೀರಿ. ಅಷ್ಟು ಸಾಲದು ಎಂಬಂತೇ, 3 ತಿಂಗಳ ಹಿಂದಷ್ಟೆ (2024- ನವೆಂಬರ್) ವಿಧಾನಸೌಧದಲ್ಲಿರುವ ಸಿಎಂ ಕಚೇರಿಯನ್ನು (323ನೇ ಕೊಠಡಿ) ರೂ.2.5 ಕೋಟಿಗೂ ಹೆಚ್ಚು ವ್ಯಯಿಸಿ ಕಾರ್ಪೊರೇಟ್ ಶೈಲಿಯಲ್ಲಿ ನವೀಕರಿಸಿಕೊಂಡು, ಕಾರ್ಪೊರೇಟ್ ಸಿಎಂ ಆಗಿದ್ದೀರಿ ಎಂದು ಕುಟುಕಿದೆ.
ಇನ್ನೂ ಡಿಸಿಎಂ ಡಿಕೆ ಶಿವಕುಮಾರ್ ಅವರ ವಸತಿಗೃಹ ದುರಸ್ತಿಗೆ ರೂ.1.38 ಕೋಟಿ ಖರ್ಚು ಮಾಡಲಾಗಿತ್ತು. ಈಗ ಡಿಕೆಶಿ ಅವರ ಆಪ್ತ ಕಾರ್ಯದರ್ಶಿ ಕೊಠಡಿ ನವೀಕರಣಕ್ಕೆ ರೂ.45.10 ಲಕ್ಷ ವೆಚ್ಚ ಮಾಡಲು ಅನುಮತಿ ನೀಡಲಾಗಿದೆ.
ಬೆಂಗಳೂರಿನಲ್ಲಿ ಗುಂಡಿ ಬಿದ್ದಿರುವ ರಸ್ತೆಗಳಿಗೆ ಸರಿಯಾಗಿ ದುರಸ್ತಿ ಮಾಡಲು ಯೋಗ್ಯತೆ ಇಲ್ಲದ ಸಿಎಂ, ಡಿಸಿಎಂ, ಜನರ ತೆರಿಗೆ ದುಡ್ಡಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಜಾತ್ರೆ ಮಾಡುತ್ತಿದೆ. ಬೇಕಾಬಿಟ್ಟಿಯಾಗಿ ಸರ್ಕಾರಿ ನಿವಾಸ ಹಾಗೂ ಕಚೇರಿಯ ಐಷಾರಾಮಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೀರಲ್ಲ, ನಿಮಗೆ ಆತ್ಮಸಾಕ್ಷಿ ಚುಚ್ಚುವುದಿಲ್ಲವೇ ಎಂದು ಕಿಡಿಕಾರಿದೆ.




