ಬೆಳಗಾವಿ: ಐದು ಕೋಟಿ ರೂ. ಹಣಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕಿಡ್ನಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತೆ ಅರೆಸ್ಟ್ ಆಗಿದ್ದಾರೆ. ಘಟಪ್ರಭಾ ಪೊಲೀಸರು ಗೋಕಾಕ್ನ ಕಾಂಗ್ರೆಸ್ ಘಟಕದ ಬ್ಲಾಕ್ ಅಧ್ಯಕ್ಷೆ ಮಂಜುಳಾ ರಾಮಗನಟ್ಟಿ ಅವರನ್ನು ಬಂಧಿಸಿದ್ದಾರೆ..
ಫೆಬ್ರವರಿ 4ರಂದು ಮೂಡಲಗಿ ತಾಲೂಕಿನ ರಾಜಾಪುರ. ಗ್ರಾಮದ ಬಸವರಾಜ ಅಂಬಿ ಅವರ ಕಿಡ್ನಾಪ್ ಆಗಿತ್ತು. ಆರೋಪಿಗಳು ಕಿಡ್ನಾಪ್ ಮಾಡಿ ಐದು ಕೋಟಿ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು. ಕಿಡ್ನಾಪ್ ಪ್ರಕರಣ ದಾಖಲಾದ 24ಗಂಟೆಯಲ್ಲಿ ಬಸವರಾಜ ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸಿದ್ದರು.
ತನಿಖೆಯ ವೇಳೆ ಕಿಡ್ನಾಪ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದ ಕಿಂಗ್ ಪಿನ್ ಮಂಜುಳಾ ಅನ್ನೋ ವಿಚಾರ ಬಹಿರಂಗವಾಗಿದೆ. ಮಂಜುಳಾ ಅವರ ಮಗ ಈಶ್ವರ ರಾಮಗನಟ್ಟಿ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ನಿಜಾಂಶ ಬಹಿರಂಗವಾಗಿದೆ.
ತಾಯಿ ನೀಡಿದ ಪ್ಲ್ಯಾನ್ ಮೇಲೆ ಮಗ ಹಾಗೂ ಸ್ನೇಹಿತರು ಉದ್ಯಮಿಯನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ತನಿಖೆ ಸಂದರ್ಭದಲ್ಲಿ ತಾಂತ್ರಿಕ ಸಾಕ್ಷಿ ಸೇರಿ ಆರೋಪಿಗಳ ಹೇಳಿಕೆ ಆಧಾರದ ಮೇಲೆ ಮಂಜುಳಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಿಡ್ನಾಪ್ ಕೇಸ್ನಲ್ಲಿ ಘಟಪ್ರಭಾ ಪೊಲೀಸರು ಒಟ್ಟು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ.




