ಬೆಳಗಾವಿ: ಲೋಕಸಭಾ ಸದಸ್ಯರು ಹಾಗೂ ಹಾಗೂ ಕರ್ನಾಟಕ ರಾಜ್ಯ ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ ಇವರು ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಾದ ರೋಶನ್ ಅಹಮದ್ ಅವರ ಉಪಸ್ಥಿಯಲ್ಲಿ ನೈರುತ್ಯ ವಲಯ ರೇಲ್ವೆ ಅಭಿಯಂತರರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಮಾನಯಾನ, ಪ್ರವಾಸೋದ್ಯಮ, ಕೆ.ಎ.ಐ.ಡಿ.ಬಿ ಅಧಿಕಾರಿಗಳ ಸಭೆಯನ್ನು ನಡೆಸಿ, ಆಯಾ ಇಲಾಖೆಯಡಿ ನಡೆದ ಅಭಿವೃದ್ಧಿ ಪರ ಕಾಮಗಾರಿಗಳ ಪ್ರಗತಿಯ ಬಗ್ಗೆ ಚರ್ಚೆ ನಡೆಸಿದರು.
ಪ್ರಾರಂಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಯ ಬೆಳಗಾವಿ ನಗರದಲ್ಲಿ ರಿಂಗ್ ರಸ್ತೆ / ಬೈಪಾಸ್ ರಸ್ತೆ ನಿರ್ಮಾಣದ ಅಂಗವಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡು ಭೂಸ್ವಾಧೀನ ಕೆಲಸವನ್ನು ಶೀಘ್ರ ಪೂರ್ಣಗೊಳಿಸಿ, ರಸ್ತೆ ಕಾಮಗಾರಿ ಪ್ರಾರಂಭಕ್ಕೆ ಅನುವುಮಾಡಿ ಕೊಡುವ ಕುರಿತು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ನೈರುತ್ಯ ರೇಲ್ವೆ ವಲಯಕ್ಕೆ ಸಂಬಂಧಿಸಿದಂತೆ, ಬೆಳಗಾವಿ-ಕಿತ್ತೂರ-ಧಾರವಾಡ ಮಾರ್ಗದಲ್ಲಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅಗತ್ಯವೆನಿಸಿರುವ ಭೂಸ್ವಾಧೀನ ಪ್ರಕ್ರಿಯೆಯ ಬಗ್ಗೆ ಭೂಸ್ವಾಧೀನ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿಯನ್ನು ಪಡೆದುಕೊಂಡು ಮುಂಬರುವ ದಿನಗಳಲ್ಲಿ ಈ ಕಾರ್ಯವನ್ನು ಶೀಘ್ರವಾಗಿ ಮುಗಿಸಿ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಅನಕೂಲತೆ ಕಲ್ಪಿಸಲು ಸಂಸದರು ಶ್ರೀ ಶೆಟ್ಟರ ಅವರು ಸೂಚಿಸಿದರು ಮುಂದುವರೆದು, ರೇಲ್ವೆ ಲೆವೆಲ್ ಕ್ರಾಸಿಂಗ್ ನಂ:371, 380, 381, 382, 383, 392 ಮತ್ತು 407 ಹತ್ತಿರ ರಸ್ತೆ ಮೇಲುಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ಅನುಮತಿ ಇದ್ದು, ಕೂಡಲೆ ಅಗತ್ಯ ಕ್ರಮವನ್ನು ಜರುಗಿಸಿ ಕಾಮಗಾರಿ ಪ್ರಾರಂಭಿಸಲು ಲೋಕಸಭಾ ಸದಸ್ಯರು ಹಾಜರಿದ್ದ ರೇಲ್ವೆ ಅಧಿಕರಿಗಳಿಗೆ ಸೂಚನೆ ನೀಡಿದರು.
ಅದರಂತೆ ಬೆಳಗಾವಿ ವಿಮಾಣ ನಿಲ್ದಾಣದ ಬೆಳವಣಿಗೆಗೆ ಸಂಬಂಧಿಸಿದಂತೆ ಅವಶ್ಯವೆನೆಸಿರುವ ಭೂಸ್ವಾಧೀನ ಕ್ರಮದ ಬಗ್ಗೆ ವಿಚಾರಿಸಲಾಗಿ, ಈ ಕುರಿತು ಸಹ ಮುಂದಿನ ಅಗತ್ಯ ಕ್ರಮವನ್ನು ಕೈಕೊಳ್ಳುವ ಬಗ್ಗೆ ಸಭೆಯಲ್ಲಿ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಯಿತು.
ಕೊನೆಯದಾಗಿ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಕ್ಷೇತ್ರದ ಪ್ರವಾಸೋದ್ಯಮ ಬೆಳವಣಿಗೆಯ ಬಗ್ಗೆ ಕೇಂದ್ರ ಸರಕಾರದ ರೂ: 100 ಕೋಟಿ ಅನುದಾನ ಬೆಳಕೆಯ ಪ್ರಗತಿಯ ಬಗ್ಗೆ ಅವಲೋಕಿಸಲಾಗಿ, ಬರುವ ದಿನಗಳಲ್ಲಿ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಅವರರವರ ಕ್ಷೇತ್ರದ ಪ್ರಗತಿಯ ಬಗ್ಗೆ ನಿಗಾ ವಹಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಸಾರ್ವಜನಿಕ ಅನುಕೂಲತೆ ಕಲ್ಪಿಸುವ ಬಗ್ಗೆ ಯಾವತ್ತಿಗೂ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಲು ಲೋಕಸಭಾ ಸದಸ್ಯರು ಶ್ರೀ ಜಗದೀಶ ಶೆಟ್ಟರ, ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳು ಶ್ರೀ ರೋಶನ್ ಅಹಮದ್ ರವರು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಯೋಜನಾ ನಿರ್ದೇಶಕರು ಶ್ರೀ ಭೂವನೇಶ ಕುಮರ, ಬೆಳಗಾವಿ ವಿಮಾಣ ನಿಲ್ದಾಣ ನಿರ್ದೇಶಕರು ಶ್ರೀ ತ್ಯಾಗರಾಜನ್, ಭೂಸ್ವಾಧೀನ ಅಧಿಕಾರಿಗಳು ಶ್ರೀ ಚೌವ್ಹಾಣ, ಶ್ರೀಮತಿ ರಾಜಶ್ರೀ ಜೈನಾಪೂರ, ನೈರುತ್ಯ ವಲಯದ ರೇಲ್ವೆ ಅಭಿಯಂತರ ಶ್ರೀ ನಿಸ್ಸಾಮುದ್ದಿನ್ ಹಗೂ ಇತರೆ ಅಧಿಕಾರಿಗಳು ಹಾಜರಿದ್ದರು.
ವರದಿ: ಪ್ರತೀಕ ಚಿಟಗಿ




