ಸಿರುಗುಪ್ಪ : ನಗರದ ಆದೋನಿ ರಸ್ತೆಯಲ್ಲಿನ ಶ್ರೀ ಕೊರವಮ್ಮ ಹಳ್ಳದ ಹತ್ತಿರದ ಶ್ರೀ ಬಸವಣ್ಣ ದೇವಸ್ಥಾನದ ಹತ್ತಿರ ಗುರುವಾರ ರಾತ್ರಿ ಅಕ್ಕಿನುಚ್ಚು ತುಂಬಿದ ಲಾರಿಯೊಂದು ರಸ್ತೆ ವಿಭಜಕ ಮೇಲೇರಿ ಪಲ್ಟಿ ಹೊಡೆದಿದ್ದು, ಯಾವುದೇ ಪ್ರಾಣಾಪಾಯ ಆಗದಿರುವುದು ಸಂತಸದ ಸಂಗತಿಯಾಗಿದೆ.
ಸುಮಾರು 7ಗಂಟೆಗೆ ಈ ಅಪಘಾತ ಜರುಗಿದ್ದು, ಲಾರಿ ಪಲ್ಟಿಯಾದ ಸ್ಥಳದಲ್ಲಿ ರಸ್ತೆಯ ಬದಿಯಲ್ಲಿದ್ದ ಬೈಕ್ಗಳು ಮತ್ತು ವೃದ್ದೆ ಸಿಕ್ಕಿ ಹಾಕಿಕೊಂಡಿರುವುದನ್ನು ಕಂಡು ನೆರೆದಿದ್ದ ಯುವಕರು ಲಾರಿಯಲ್ಲಿದ್ದ ಅಕ್ಕಿ ನುಚ್ಚಿನ ಚೀಲಗಳನ್ನು ಖಾಲಿ ಮಾಡಿ ಅಜ್ಜಿಯನ್ನು ರಕ್ಷಿಸಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು.
ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ವಾಹನಗಳು ಸಂಚರಿಸದೇ ದಟ್ಟಣೆ ಹೆಚ್ಚಾಯಿತು. ಸುಮಾರು ಮೂರು ತಾಸುಗಳ ನಂತರ ಪೋಲೀಸರು ಹರಸಾಹಸದೊಂದಿಗೆ ರಸ್ತೆಯ ಸುಗಮ ಸಂಚಾರದ ವ್ಯವಸ್ಥೆ ಮಾಡಿದರು.
ಕೆಎ-29, ಬಿ-5464 ನೋಂಧಣಿಯ ಬೃಹತ್ ಲಾರಿಯನ್ನು ಮೂರು ಕ್ರೇನ್ಗಳನ್ನು ಬಳಸಿ ಮೇಲೆತ್ತಿ ಠಾಣೆಗೆ ಕರೆದೊಯ್ಯಲಾಯಿತು.
ಕೆಳಗೆ ಸಿಕ್ಕಿಹಾಕಿಕೊಂಡಿದ್ದ ಮೂರು ಬೈಕ್ಗಳು ನುಜ್ಜುಗುಜ್ಜಾಗಿರುವುದು ಕಂಡುಬಂದಿದ್ದು, ಈ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ರಸ್ತೆ ವಿಭಜಕಕ್ಕೆ ಸರಿಯಾದ ರೇಡಿಯಂ ಪ್ರತಿಫಲಕ, ಸೂಚನ ಫಲಕ ಹಾಗೂ ಬೀದಿ ದೀಪಗಳನ್ನು ಅಳವಡಿಸದ ಹಿನ್ನಲೆ ಈ ರೀತಿ ಅಪಘಾತಗಳು ಇಲ್ಲಿ ಹೆಚ್ಚುತ್ತಿವೆ.
ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಇಲ್ಲಾಗುವ ಸಾವು ನೋವುಗಳನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿ ವಿಜಯ್ಕುಮಾರ್ ಅವರು ಪರಿಶೀಲನೆ ನಡೆಸಿದ್ದು, ಪಡಿತರ ಅಕ್ಕಿಯ ಮಿಶ್ರಣ ಕಾಣುತ್ತಿಲ್ಲವಾದರೂ ಮಾದರಿ ಪರೀಕ್ಷೆಗೆ ಕಳುಹಿಸಲಾಗುವುದು.
ಸ್ಥಳೀಯ ಅಕ್ಕಿ ಗಿರಣಿಗಳಿಂದ ಕೋಳಿಗಳು ತಿನ್ನಲು ಅಕ್ಕಿನುಚ್ಚು ಸಂಗ್ರಹಿಸಿ ಸಿಂಧನೂರು ಮಾರ್ಗವಾಗಿ ಬಾಗಲಕೋಟೆಗೆ ಹೋಗುತ್ತಿರುವ ಬಗ್ಗೆ ಮಾಹಿತಿಯಿದೆ ಎಂದು ತಿಳಿಸಿದರು.
ವರದಿ : ಶ್ರೀನಿವಾಸ ನಾಯ್ಕ




