ಬೆಂಗಳೂರು: ಕೆಎಸ್ಆರ್ಟಿಸಿಯು ಮೂರು ರಾಷ್ಟ ಮಟ್ಟದ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಭಾರತದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ ನೀಡುವ 2023-24ನೇ ಸಾಲಿನ ಮೂರು ರಾಷ್ಟ್ರೀಯ ಸಾರ್ವಜನಿಕ ಬಸ್ ಸಾರಿಗೆ ಪ್ರಶಸ್ತಿಗಳು ಕೆಎಸ್ಆರ್ಟಿಸಿಗೆ ದಕ್ಕಿದೆ.
ಅಶ್ವಮೇಧ ಬ್ರ್ಯಾಂಡಿಂಗ್ ಹಾಗೂ ವರ್ಚಸ್ಸು ಅಭಿವೃದ್ಧಿ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಯೋಜನೆಗಳು ಹಾಗೂ ಗಣಕೀಕರಣ ಉಪಕ್ರಮಗಳಿಗಾಗಿ ಈ ಪ್ರಶಸ್ತಿಗಳು ಲಭಿಸಿದೆ.
ದೆಹಲಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ ಕಾರ್ಯಕ್ರಮದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಡಾ.ಕಿರಣ್ ಬೇಡಿ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಉಪಮುಖ್ಯ ಸಂಚಾರ ವ್ಯವಸ್ಥಾಪಕ ಗುರುರಾಜ.ಹೆಚ್, ಕಲ್ಯಾಣಾಧಿಕಾರಿ ರಾಧ ಅವರು ಪ್ರಶಸ್ತಿಗಳನ್ನು ಸ್ವೀಕರಿಸಿದರು.




