ಮೈಸೂರು: ವಿಜಯನಗರದ 2ನೇ ಹಂತದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಬುಧವಾರ ಇಬ್ಬರು ಯುವತಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಬೆಳಗ್ಗೆ 8.15ರಿಂದ 9.55ರೊಳಗಿನ ಕನ್ಯಾ ಮತ್ತು ಮೇಷ ಲಗ್ನದಲ್ಲಿ ಚಿತ್ರದುರ್ಗ ಜಿಲ್ಲೆಯ ಕರಿಕೆರೆ ಗ್ರಾಮದ ಜಿ.ಆರ್.ಸಂದೀಪ್, ಅಶ್ವಿನಿಯೊಂದಿಗೆ ಹಾಗೂ ವಿಜಯನಗರ ಜಿಲ್ಲೆಯ ನಾಗೇನಹಳ್ಳಿ ಗ್ರಾಮದ ಕೆ.ವಿಕಾಸ್, ಆಯೇಷಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ನಿಲಯದಲ್ಲಿ ಐದು ವರ್ಷದ ಮಗುವಿನಿಂದ ಇರುವ ಅಶ್ವಿನಿ ಹಾಗೂ 10 ವರ್ಷದ ಮಗುವಿನಿಂದ ಇರುವ ಆಯೇಷಾ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ್ದು, ಅವರ ಒಪ್ಪಿಗೆಯ ಮೇರೆಗೆ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯಕ್ರಮ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಸಿದ್ಧತೆ ಮಾಡಿಕೊಂಡು, ವರರ ಪೋಷಕರ ಸಮ್ಮುಖದಲ್ಲಿ ನಿಲಯದ ಅಧಿಕಾರಿಗಳು, ಸಿಬ್ಬಂದಿ ಹಾಗೂ ನಿವಾಸಿಗಳು ನೂತನ ವಧು-ವರರನ್ನು ಹರಸಿದರು.
ಸಂಪ್ರದಾಯದಂತೆ ನಿಲಯದಲ್ಲಿ ಸೋಮವಾರವೇ ಅರಿಶಿಣ ಶಾಸ್ತ್ರ, ವೀಳ್ಯ ಶಾಸ್ತ್ರ, ಬಳೆ ಶಾಸ್ತ್ರ ಸೇರಿದಂತೆ ವಿವಾಹಪೂರ್ವ ಕಾರ್ಯಕ್ರಮಗಳು ನಡೆದವು. ದಂಪತಿಯ ಹೆಸರಲ್ಲಿ 15 ಸಾವಿರ ರೂ. ಠೇವಣಿ ಇಡಲಾಗಿದ್ದು, ಐದು ವರ್ಷದವರೆಗೂ ಇಲಾಖೆ ನಿಗಾವಹಿಸಲಿದೆ.
ಪೋಷಕರು ಅಥವಾ ನೋಡಿಕೊಳ್ಳುವವರು ಯಾರೂ ಇಲ್ಲದ ಹೆಣ್ಣು ಮಕ್ಕಳಿಗೆ ರಾಜ್ಯ ಸರಕಾರ, ಈ ಮಹಿಳಾ ನಿಲಯದಲ್ಲಿ ಆಶ್ರಯ ನೀಡಿದೆ. ಮೈಸೂರು ಕೇಂದ್ರದಲ್ಲಿ ಸದ್ಯ 60 ಮಂದಿ ಇದ್ದಾರೆ. ಶಿಕ್ಷಣದ ಜೊತೆಗೆ ಆಸಕ್ತಿ ಅನುಸಾರವಾಗಿ ವೃತ್ತಿಪರ ತರಬೇತಿ ನೀಡಲಾಗುತ್ತದೆ. ಉದ್ಯೋಗಕ್ಕೆ ಸೇರುವ ಅವಕಾಶವೂ ಇದೆ. ಹಾಗೆಯೇ ವಿವಾಹವಾಗಲು ಒಪ್ಪಿದರೆ ಪುನರ್ವಸತಿ ಕಾಯಕ್ರಮದಡಿ ಸೂಕ್ತ ವರನನ್ನು ನೋಡಿ, ವಿವಾಹ ಮಾಡಲಾಗುತ್ತದೆ.
ನಿನ್ನೆ ಅಶ್ವಿನಿ ಹಾಗೂ ಆಯೇಷಾ ಅವರನ್ನು ಸಾಂಪ್ರದಾಯಿಕವಾಗಿ ಮದುವೆ ಮಾಡಿ, ಅವರ ಗಂಡಂದಿರ ಮನೆಗೆ ಕಳುಹಿಸಲಾಯಿತು. ರಾಜ್ಯ ಮಹಿಳಾ ನಿಲಯದ ಅಧೀಕ್ಷಕಿ ಎಂ.ಆರ್.ಶೈಲಾ, ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಬಸವರಾಜು, ಆರ್ಎಲ್ಎಚ್ಪಿ ಸಂಸ್ಥೆಯ ಸರಸ್ವತಿ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕೊರೊನಾ ಹಾಗೂ ಇನ್ನಿತರ ಕಾರಣಗಳಿಂದ ಆರೇಳು ವರ್ಷಗಳಿಂದ ನಿಲಯದಲ್ಲಿ ವಿವಾಹ ನಡೆದಿರಲಿಲ್ಲ.



