ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜನರು ಬೆಚ್ಚಿಬೀಳುವಂತಹ ಪ್ರಕರಣವೊಂದು ನಡೆದಿದೆ. ವ್ಯಕ್ತಿಯೋರ್ವ ಮನೆಯಲ್ಲಿ ಇದ್ದಂತಹ ಮೂವರು ಸಂಬಂಧಿಕರನ್ನು ಬಂದೂಕಿನಿಂದ ಗುಂಡು ಹಾರಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಅತ್ತೆ, ನಾದಿನಿ ಹಾಗೂ ಮಗುವಿನ ಕೊಲೆ ಮಾಡಿದ್ದು, ಅತ್ತೆ ಜ್ಯೋತಿ (50), ನಾದಿನಿ ಸಿಂಧು (26) ಹಾಗೂ 7 ವರ್ಷದ ಮಗುವನ್ನು ರತ್ನಾಕರ್ ಎಂಬಾತ ಕೊಲೆ ಮಾಡಿದ್ದಾನೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಮಾಗಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೃತ ಸಿಂಧು ಅವರ ಪತಿ ಅವಿನಾಶ್ ಕಾಲಿಗೂ ಗುಂಡೇಟು ತಗುಲಿದೆ. ನಾಡ ಬಂದೂಕಿನಿಂದ ಮೂವರನ್ನು ಈ ರತ್ನಾಕರ್ ಹತ್ಯೆ ಮಾಡಿದ್ದಾನೆ. ಈ ಮೂವರನ್ನು ಕೊಲೆ ಮಾಡಿದ ಬಳಿಕ ರತ್ನಾಕರ್ ತೋಟಕ್ಕೆ ತೆರಳಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕಳೆದ ಎರಡು ವರ್ಷಗಳಿಂದ ಕೌಟುಂಬಿಕ ಕಲಹ ಇವರ ಮಧ್ಯೆ ನಡೆಯುತ್ತಿತ್ತು. ಇದರಿಂದ ಬೇಸತ್ತು ರತ್ನಾಕರ್, ಈ ಕೃತ್ಯ ಎಸಗಿದ್ದು ಮೂವರು ಸಂಬಂಧಿಕರನ್ನು ಕೊಂದು ನಂತರ ತಾನು ಸಾವಿಗೆ ಶರಣಾಗಿದ್ದಾನೆ ಎಂದು ಎಸ್ಪಿ ವಿಕ್ರಮ್ ಆಮಟೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಯ ನಂತರ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.