ಯಾದಗಿರಿ : ಬಟ್ಟೆ ತೊಳೆಯಲೆಂದು ಬಾವಿಗೆ ತೆರಳಿದ್ದ ಇಬ್ಬರು ಬಾಲಕಿಯರು ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಯಾದಗಿರಿಯ ಮೊಟ್ನಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ವೈಶಾಲಿ (17) ಮತ್ತು ನವಿತಾ( 16) ಮೃತ ದುರ್ದೈವಿಗಳು.
ಗುರುವಾರ ವಾಡಿಕೆಯಂತೆ ಇಬ್ಬರೂ ಬಟ್ಟೆ ಒಗೆಯಲು ಬಾವಿಗೆ ತೆರಳಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ದುರ್ಘಟನೆ ಸಂಭವಿಸಿದ್ದು, ಸ್ಥಳದಲ್ಲಿ ರಕ್ಷಿಸಲೂ ಸಹ ಯಾರೂ ಇರಲಿಲ್ಲ. ಬಳಿಕ ಬೇರೆ ಗ್ರಾಮಸ್ಥರು ಬಾವಿಯ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಶವವನ್ನು ಹೊರತೆಗೆದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಗುರ್ಮಿಠಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.




