ತುರುವೇಕೆರೆ : ಗೃಹಿಣಿಯರಿಗಾಗಿ ಸರ್ಕಾರ ಜಾರಿಗೊಳಿಸಿರುವ “ಗೃಹಲಕ್ಷ್ಮೀ” ಆಶಾದಾಯಕ ಯೋಜನೆಯಾಗಿದೆ ಎಂದು ತಾಪಂ ಆಡಳಿತಾಧಿಕಾರಿ ಹೆಚ್.ಮೂರ್ತಿ ತಿಳಿಸಿದರು.
ತಾಲ್ಲೂಕು ಪಂಚಾಯತಿ ಸಬಾಂಗಣದಲ್ಲಿ ತುಮಕೂರು ಸಹಕಾರ ಸಂಘಗಳ ಉಪನಿಬಂಧಕರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆಯಿಂದ ಸಾಕಷ್ಟು ಕುಟುಂಬದ ಸಣ್ಣಪುಟ್ಟ ಸಮಸ್ಯೆ ಬಗೆಹರಿದಿವೆ. ಕೆಲವು ಮಹಿಳೆಯರು ಚಿಲ್ಲರೆ ಅಂಗಡಿಯನ್ನಿಟ್ಟುಕೊಂಡು ಸ್ವಾಭಿಮಾನದ ಬದುಕನ್ನು ಸಾಗಿಸುತ್ತಿದ್ದಾರೆ. ಕೆಲವರು ತಮ್ಮ ಮಕ್ಕಳ ವಿದ್ಯಾಬ್ಯಾಸಕ್ಕೆ ಬಳಸಿದ್ದಾರೆ. ಹತ್ತಾರು ರೀತಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಹಣ ಬಳಕೆಯಾಗುತ್ತಿದ್ದು, ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಟ್ಟಲ್ಲಿ ಅದರ ಫಲಶೃತಿ ಖಂಡಿತಾ ದೊರೆಯುತ್ತದೆ ಎಂದರು.

ಸಭೆಯಲ್ಲಿ CDPO ವೆಂಕಟಪ್ಪ ತಮ್ಮ ಸೇವಾ ಅವಧಿಯ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡು ಮಾತನಾಡಿ, ಹಾಡಿಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿ, ಬುಡಕಟ್ಟು ಸಮುದಾಯಗಳ ಹೆಣ್ಣು ಮಕ್ಕಳು ಈಗಲೂ ಜೀವನ ನಡೆಸಲು ಹರಸಾಹಸ ಪಡುತ್ತಾರೆ. ಅಂತಹ ಸಮುದಾಯಗಳಿಗೆ ಗೃಹಲಕ್ಷಿ ಯೋಜನೆ ಬಹಳ ಉಪಯೋಗವಾಗುತ್ತದೆ. ಕಡಿಮೆ ವೇತನಕ್ಕೆ ಕೆಲಸ ಮಾಡುವ ಈ ಸಮುದಾಯಗಳಿಗೆ ಗೃಹಲಕ್ಷ್ಮೀಯ ಎರಡು ಸಾವಿರ ರೂ ಹಣ ಖಾತೆಗೆ ಬಂದಲ್ಲಿ ಅವರ ಖುಷಿಗೆ ಪಾರವೇ ಇಲ್ಲ ಎಂದು ಸರ್ಕಾರದ ಯೋಜನೆ
ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಮಾತನಾಡಿ, ಬಿಸಿಯೂಟ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಮೊಟ್ಟೆ, ಹಾಲು, ಬಾಳೆಹಣ್ಣು ಇದರ ಜೊತೆಗೆ ರಾಗಿ ಮಾಲ್ಟ್ ನೀಡುತ್ತಿರುವ ಕಾರಣ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ದೊರಕುತ್ತಿದೆ, ಇದರ ಜೊತೆಗೆ ದಿನನಿತ್ಯ ತರಕಾರಿ ಸೊಪ್ಪು ಖರೀದಿಸಲು ಶಾಲಾ ಮುಖ್ಯ ಶಿಕ್ಷಕರಿಗೆ ಜವಾಬ್ದಾರಿ ನೀಡಿದ್ದು ಅದರ ಖರ್ಚು ವೆಚ್ಚ ಮುಖ್ಯ ಶಿಕ್ಷಕರ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದರು.
ಸಭೆಗೆ ಗೈರಾಗಿರುವ ಆರೋಗ್ಯ ಇಲಾಖೆ, PWD ಇಲಾಖೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ನೋಟೀಸ್ ನೀಡಲು ಸೂಚಿಸಿದರು. ಈ ಸಭೆಯಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಜಯ್ಯ, ಕೃಷಿ ಇಲಾಖೆ ನಿರ್ದೇಶಕಿ ಪೂಜಾ, ಎನ್.ಆರ್.ಇ.ಜಿ. ಸಹಾಯಕ ನಿರ್ದೇಶಕ ಸುರೇಶ್, ಚಂದ್ರಶೇಖರ್, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಪಂ ವ್ಯವಸ್ಥಾಪಕರು ಮುಂತಾದವರು ಭಾಗವಹಿಸಿದ್ದರು.
ವರದಿ : ಗಿರೀಶ್ ಕೆ ಭಟ್




