ಬೆಂಗಳೂರು : ರಾಜ್ಯದಲ್ಲಿ ಮೇ ಅಂತ್ಯದವರೆಗೆ ಒಟ್ಟು 3.37 ಕೋಟಿ ವಾಹನಗಳ ನೋಂದಣಿಯಾಗಿವೆ. ಅದರಲ್ಲಿ 1.24 ಕೋಟೆ ಬೆಂಗಳೂರು ನಗರದಲ್ಲಿಯೇ ಇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸಾರಿಗೆ ಇಲಾಖೆಗೆ ವಾಹನ ತಪಾಸಣೆಗಾಗಿ 40 ಮಹಿಂದ್ರಾ ಬೊಲೆರೊ ವಾಹನಗಳನ್ನು ಬುಧವಾರ ಹಸ್ತಾಂತರ ಮಾಡಿ ಅವರು ಮಾತನಾಡಿದರು. ‘ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೋಟಾರು ವಾಹನ ನಿರೀಕ್ಷಕರ ಸಂಖ್ಯೆಯೂ ಹೆಚ್ಚಳವಾಗಬೇಕು. ತಪಾಸಣೆಗಳೂ ಹೆಚ್ಚಾಗಬೇಕು. ಅದಕ್ಕಾಗಿ ಈಗಾಗಲೇ 129 ನಿರೀಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ವಿವರಿಸಿದರು.
ಸಾರಿಗೆ ಇಲಾಖೆಯಿಂದ ರಸ್ತೆ ಸುರಕ್ಷತೆ ಮತ್ತು ಪ್ರವರ್ತನ ಚಟುವಟಿಕೆಯನ್ನು ಚುರುಕುಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸೂಚನೆಗಳನ್ನು ನೀಡಿವೆ. ಜನಸ್ನೇಹಿ ಕಾರ್ಯಕ್ರಮಗಳನ್ನುಜಾರಿಗೊಳಿಸಬೇಕು ಎಂದು ತಿಳಿಸಿವೆ. ಅದಕ್ಕೆ ಅನುಗುಣವಾಗಿ ಕೆಲಸ ಮಾಡಲು ವಾಹನ ಖರೀದಿಸಲಾಗಿದೆ ಎಂದರು.
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಚನೆಯಾಗಿರುವ ರಸ್ತೆ ಸುರಕ್ಷತಾ ಸಮಿತಿಯು ನೀಡಿರುವ ಸೂಚನೆಯಂತೆ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಸುರಕ್ಷತಾ ಮಾನದಂಡಗಳನ್ನು ಅಳವಡಿಸಿಕೊಳ್ಳದ ವಾಹನಗಳಿಗೆ ದಂಡ ಹಾಕಬೇಕು. ಚಾಲಕರು,ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾತ್ರಿ ಸಂಚಾರದ ವೇಳೆ ಟೈಲ್ ಲ್ಯಾಂಪ್, ಇಂಡಿಕೇಟರ್ಗಳು ಸುಸ್ಥಿತಿಯಲ್ಲಿ ಇವೆಯೇ ಎಂದು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.




