ಸಿರುಗುಪ್ಪ : ರಾಜ್ಯದ ವಸತಿ ಇಲಾಖೆಯಿಂದ ಮನೆ ಹಂಚಿಕೆಯ ವೇಳೆ ಕೇಳಿಬಂದಿರುವ ಭ್ರಷ್ಟಾಚಾರದ ನೈತಿಕ ಹೊಣೆಹೊತ್ತು ವಸತಿ ಸಚಿವರಾದ ಜಮೀರ್ ಅಹಮದ್ ಅವರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಪಕ್ಷದಿಂದ ಆಗ್ರಹಿಸಲಾಯಿತು.
ನಗರದ ತಾಲೂಕು ಪಂಚಾಯಿತಿ ಕಛೇರಿಯನ್ನು ಮುಚ್ಚುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಎಮ್.ಎಸ್.ಸಿದ್ದಪ್ಪ ಅವರು ಮಾತನಾಡಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಎಲ್ಲಾ ಪತ್ರಿಕೆ ಮಾದ್ಯಮಗಳಲ್ಲಿ ಬಹಿರಂಗಗೊಂಡಿದೆ.

ತಮ್ಮದೇ ಆಡಳಿತ ಪಕ್ಷದ ಶಾಸಕರು ಭ್ರಷ್ಟಾಚಾರದ ಬಗ್ಗೆ ನೇರ ಆರೋಪವನ್ನು ಮಾಡಿದ್ದಾರೆ. ಆದ್ದರಿಂದ ಈ ಕೂಡಲೇ ಸಚಿವರಾದ ಜಮೀರ್ ಅಹಮದ್ ಅವರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡಿ ಉಚಿತವಾಗಿ ದೊರೆಯಬೇಕಾಗಿರುವ ವಸತಿ ಸೌಲಭ್ಯದಲ್ಲೂ ವಸತಿ ಸಚಿವ ಜಮೀರ್ ಅಹಮದ್ ಅವರ ಆಪ್ತರಿಂದ ಒಂದೊಂದು ಮನೆಗೆ 30 ರಿಂದ 40 ಸಾವಿರ ರೂಪಾಯಿಗಳ ಲಂಚ ಪಡೆದು ಕಡು ಬಡವರಿಗೆ ವಂಚನೆ ಮಾಡಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ನಮ್ಮ ಪಕ್ಷದಿಂದ ಪ್ರತಿಭಟನೆಯನ್ನು ನಡೆಸಲಾಗುತ್ತಿದೆಂದರು.
ಮುಖಂಡರಾದ ಟಿ.ಧರಪ್ಪ ನಾಯಕ ಅವರು ಮಾತನಾಡಿ ಆಯಾ ಕ್ಷೇತ್ರಗಳ ಶಾಸಕರ ಮನವಿಗಳನ್ನು ಗಾಳಿ ತೂರಿ ಭ್ರಷ್ಟಾಚಾರವನ್ನು ನಡೆಸಿರುವ ಬಗ್ಗೆ ಕಾಂಗ್ರೇಸ್ ಪಕ್ಷದ ಬಿ.ಆರ್.ಪಾಟೀಲ್ ಅವರೇ ಆರೋಪ ಮಾಡಿದ್ದಾರೆ. ಆದ್ದರಿಂದ ಸಚಿವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಬಿಜೆಪಿ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.
ವರದಿ: ಶ್ರೀನಿವಾಸ ನಾಯ್ಕ




