ತುರುವೇಕೆರೆ : 2025-26ನೇ ಸಾಲಿನ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜುಲೈ 27 ರಂದು ಭಾನುವಾರ ಮಧ್ಯಾಹ್ನ 3 ಗಂಟೆಗೆ ರೋಟರಿ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ನ ಮಾಜಿ ಅಧ್ಯಕ್ಷೆ, ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷೆ ಲತಾಪ್ರಸನ್ನ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 4 ವರ್ಷದಿಂದ ತಾಲ್ಲೂಕಿನ ಮಹಿಳಾ ಮಣಿಗಳ ಏಕೈಕ ಸಂಸ್ಥೆಯಾಗಿರುವ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪವು ತಾಲೂಕಿನಾದ್ಯಂತ ಉತ್ತಮ ರೀತಿಯಲ್ಲಿ ಸೇವಾ ಕಾರ್ಯಗಳನ್ನು ನಡೆಸಿದೆ. ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ, ಮಲ್ಲಾಘಟ್ಟ ಕೆರೆಯಲ್ಲಿ ಬಟ್ಟೆ ಬದಲಾಯಿಸಲು ಅಗತ್ಯ ಕುಠೀರ ನಿರ್ಮಾಣ, ಬಾಣಸಂದ್ರ ಹಾಗೂ ಮಾಯಸಂದ್ರ ರಸ್ತೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣ, ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ, ಶಾಲಾಕಾಲೇಜಿಗೆ ಪೀಠೋಪರಣ, ಪಾಠೋಪಕರಣ ವಿತರಣೆ, ವಿದ್ಯಾರ್ಥಿಗಳಿಗೆ ನೆರವು, ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಸಾಗಿಸಲು ಸ್ವ ಉದ್ಯೋಗ ತರಬೇತಿ ಶಿಬಿರ, ವಿವಿಧ ಸಂಘ ಸಂಸ್ಥೆಗಳೊಡಗೂಡಿ ರಾಷ್ಟೀಯ ಹಬ್ಬಗಳ ಆಚರಣೆ, ಆರೋಗ್ಯ ಶಿಬಿರಗಳು ಸೇರಿದಂತೆ ಹತ್ತಾರು ರೀತಿಯ ಜನರಿಗೆ ಅನುಕೂಲವಾಗುವಂತಹ ಸೇವಾ ಕಾರ್ಯಕ್ರಮಗಳನ್ನು ನಡೆಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಚಟುವಟಿಕೆ ನಡೆಸುವ ಆಶಯವನ್ನು ಸಂಸ್ಥೆ ಹೊಂದಿದೆ ಎಂದರು.
2025-26 ನೇ ಸಾಲಿಗೆ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ನೂತನ ಅಧ್ಯಕ್ಷರಾಗಿ ಇಂದಿರಾಪ್ರಭಾಕರ್, ಕಾರ್ಯದರ್ಶಿಯಾಗಿ ಮಮತ ಅಶೋಕ್, ಖಜಾಂಚಿಯಾಗಿ ರೂಪರಂಗಪ್ಪ ಹಾಗೂ ಅವರ ತಂಡ ಜುಲೈ 27 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮವನ್ನು ಜಿಲ್ಲಾ ಛೇರ್ಮನ್ ರಜನಿಗೌಡ ಉದ್ಘಾಟಿಸಲಿದ್ದು, ನೂತನ ಪದಾಧಿಕಾರಿಗಳಿಗೆ ಮಾಜಿ ಜಿಲ್ಲಾ ಛೇರ್ಮನ್ ಶ್ರೀಮತಿ ಮಾಸ್ಟರ್ ಪ್ರಮಾಣವಚನ ಬೋಧಿಸಲಿದ್ದಾರೆ ಎಂದರು.
ನಿಯೋಜಿತ ಅಧ್ಯಕ್ಷೆ ಇಂದಿರಾಪ್ರಭಾಕರ್ ಹಾಗೂ ಕಾರ್ಯದರ್ಶಿ ಮಮತಾ ಅಶೋಕ್ ಮಾತನಾಡಿ, ಮುಂಬರುವ 2025-26ನೇ ಸಾಲಿಗೆ ಅಧ್ಯಕ್ಷ, ಕಾರ್ಯದರ್ಶಿಯನ್ನಾಗಿ ಕ್ಲಬ್ ನ ಸರ್ವ ಸದಸ್ಯರು ಒಮ್ಮತ ದಿಂದ ನಮ್ಮನ್ನು ಆಯ್ಕೆ ಮಾಡಿದ್ದು, ಅವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು.
ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಮನೆಯಲ್ಲಿ ಹಾಗೂ ಹೊರಗಡೆ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿದ್ದು, ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದಾರೆ. ಆದ್ದರಿಂದ ಮಹಿಳೆಯರಿಗೆ ಮನರಂಜನೆ ಅತ್ಯವಶ್ಯಕವಾಗಿ ಬೇಕಿದೆ. ಈ ಹಿನ್ನೆಲೆಯಲ್ಲಿ ನಮ್ಮ ಅವಧಿಯಲ್ಲಿ ಸೇವಾ ಕಾರ್ಯಗಳ ಜೊತೆಗೆ ಮನರಂಜನೆಗೆ ಹೆಚ್ಚಿನ ಒತ್ತನ್ನು ನೀಡಲಾಗುವುದು ಎಂದರು.
ಕ್ಷೇತ್ರದ ಶಾಸಕರಾದ ಎಂ.ಟಿ.ಕೃಷ್ಣಪ್ಪನವರ ಅನುದಾನ ಹಾಗೂ ಕ್ಲಬ್ ನ ಗೌರವ ಸಲಹೆಗಾರರಾದ ಡಾ.ಆಶಾ ಚೌದ್ರಿ ಅವರ ಸಹಕಾರದಿಂದ ತಾಲ್ಲೂಕಿನ ದಂಡಿನಶಿವರ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ (ತಂಗುದಾಣ) ನಿರ್ಮಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ನಿಕಟಪೂರ್ವ ಅಧ್ಯಕ್ಷೆ ನೇತ್ರಾಸಿದ್ದಲಿಂಗಸ್ವಾಮಿ, ಕಾರ್ಯದರ್ಶಿ ಆನಂದಜಲ, ಸುವರ್ಣಮ್ಮ ಬಸವರಾಜು, ಭಾಗ್ಯಸಿದ್ದೇಶ್, ಆನಂದಮದನ್, ಸವಿತಾಅನಿಲ್, ರೇಖಾಮೂಡಲಗಿರಿ, ಲಲಿತ ಪ್ರಕಾಶ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್




