ರಾಯಚೂರು :ನಗರದ ರಿಮ್ಸ್ ಆಸ್ಪತ್ರೆ ಚಿಕಿತ್ಸೆಗೆಂದು ದಾಖಲಾಗಿದ್ದ 9 ವರ್ಷದ ಬಾಲಕ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕ ಆಸ್ಪತ್ರೆಯಿಂದ ಹೊರಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ರಾಯಚೂರು ತಾಲೂಕಿನ ಜುಲಮಗೇರಾ ತಾಂಡದ ನಾಗಲಕ್ಷ್ಮಿ ಅವರ ಪುತ್ರ 9 ವರ್ಷದ ವಿಷ್ಣುನಾಯಕ ಎಂಬ ಬಾಲಕ ಜೂನ್ 22 ರ ಬೆಳಗಿನ ಜಾವ 2.25 ಕ್ಕೆ ಆಸ್ಪತ್ರೆಯಿಂದ ಒಬ್ಬನೇ ಹೊರಹೋಗುವ ದೃಶ್ಯ ಸೆರೆಯಾಗಿದೆ. ನಾಪತ್ತೆಯಾದ ಕುರಿತು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕ ನಾಪತ್ತೆಯಾಗಿ 43 ದಿನಗಳು ಕಳೆದರೂ ಬಾಲಕನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸುತ್ತಿದ್ದು, ಬಾಲಕನ ತಾಯಿ ಮತ್ತು ಕುಟುಂಬಸ್ಥರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಕೂಲಿ ನಾಲಿ ಮಾಡಿ ದುಡಿದು ತಿನ್ನುವ ತಾಯಿ ಕಳೆದ 43 ದಿನಗಳಿಂದ ಮಗನ ಜಪ ಮಾಡುತ್ತಾ ಹೆತ್ತ ಕರುಳು ಪೊಲೀಸ್ ಠಾಣೆ, ಎಸ್ಪಿ ಕಚೇರಿ ಹೀಗೆ ಅಲೆದಾಡುತ್ತಿದ್ದಾರೆ. ಆಗಸ್ಟ್ 4 ರ ಸೋಮವಾರ ಪುನಃ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ಬಾಲಕನನ್ನ ಹುಡುಕಿಕೊಡುವಂತೆ ಕಣ್ಣೀರು ಹಾಕಿದ್ದಾಳೆ.
ವರದಿ: ಗಾರಲದಿನ್ನಿ ವೀರನಗೌಡ




