ತುರುವೇಕೆರೆ : ಪಟ್ಟಣದ ರಂಗಭೂಮಿ ಕಲಾವಿದ ಟಿ.ಎಸ್. ರಾಘವೇಂದ್ರ ಅವರ ರಂಗಭೂಮಿಯ ಸೇವೆಯನ್ನು ಗುರುತಿಸಿ ತಾಲ್ಲೂಕು ಆಡಳಿತ ಸ್ವಾತಂತ್ರ್ಯ ದಿನಾಚರಣೆಯಂದು ಸನ್ಮಾನಿಸಿತು.
ಶಾಸಕ ಎಂ.ಟಿ.ಕೃಷ್ಣಪ್ಪನವರ ಅಧ್ಯಕ್ಷತೆಯಲ್ಲಿ ರಂಗಭೂಮಿಯ ಹಿರಿಯ ದಿಗ್ಗಜ ಕಲ್ಚರ್ ಕಮೆಡಿಯನ್ ಕೆ.ಹಿರಣ್ಣಯ್ಯ ರಂಗಮಂದಿರ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಂಗಭೂಮಿ ಕಲಾವಿದ ಟಿ.ಎಸ್.ರಾಘವೇಂದ್ರ ಅವರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಿಸಲಾಯಿತು. ರಂಗಭೂಮಿ, ಕಲೆ, ಸಂಸ್ಕೃತಿಯ ಬಗ್ಗೆ ಅಪಾರ ಒಲವನ್ನು ಹೊಂದಿರುವ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ರಾಘವೇಂದ್ರ ಅವರಿಗೆ ಸ್ಥಳದಲ್ಲೇ ಪೌರಾಣಿಕ ನಾಟಕದಲ್ಲಿನ ಶ್ರೀಕೃಷ್ಣನ ಗೀತೆಯೊಂದನ್ನು ಹಾಡುವಂತೆ ಸೂಚಿಸಿದರು. ಶಾಸಕರ ಆಶಯದಂತೆ ರಾಘವೇಂದ್ರ ಶ್ರೀಕೃಷ್ಣನ ಗೀತೆಯನ್ನು ಹಾಡಿ ಗಣ್ಯರು, ನಾಗರೀಕರನ್ನು ರಂಜಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ರಂಗಭೂಮಿ ಕಲಾವಿದ ಟಿ.ಎಸ್.ರಾಘವೇಂದ್ರ, ತಾಲ್ಲೂಕು ಆಡಳಿತ ಹಾಗೂ ಗಣ್ಯರು ನನ್ನ ರಂಗಭೂಮಿ ಸೇವೆಯನ್ನು ಗುರುತಿಸಿ ಸನ್ಮಾನಿಸಿರುವುದು ಬಹಳ ಸಂತೋಷ ತಂದಿದೆ. ತಾಲ್ಲೂಕು ಆಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ರಂಗಭೂಮಿಯ ಬಗ್ಗೆ ಆಸಕ್ತಿ ಮತ್ತು ಅರಿವಿಲ್ಲದ ನನ್ನನ್ನು ರಂಗಭೂಮಿಗೆ ಕರೆತಂದು ಬಣ್ಣ ಹಚ್ಚಿ ಅಭಿಮನ್ಯುವಿನ ಪಾತ್ರ ನೀಡಿ ರಂಗಭೂಮಿಯ ವೇದಿಕೆಗೆ ಕರೆತಂದು ಆಸಕ್ತಿ ಬರುವಂತೆ ಮಾಡಿದ್ದು ಜೋಗಿಪಾಳ್ಯದ ಗೋವಿಂದಪ್ಪನವರು, ಆ ನಂತರದಲ್ಲಿ ಶಿವಶಕ್ತಿ ಕಲಾವಿದರು ಸಂಸ್ಥೆಯ ಅಧ್ಯಕ್ಷರಾದ ಅಮಾನಿಕೆರೆ ಮಂಜುನಾಥ್, ರಂಗಕಲಾವಿದ ದೇವೀಹಳ್ಳೀ ಮಂಜಣ್ಣ, ಚಂದ್ರಮೂರ್ತಿ ಅವರುಗಳು ನನ್ನಲ್ಲಿರುವ ರಂಗಕಲೆಯನ್ನು ಗುರುತಿಸಿ ನಾಟಕದಲ್ಲಿ ವಿಭಿನ್ನ ಪಾತ್ರದಲ್ಲಿ ಅವಕಾಶಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇವರುಗಳಿಲ್ಲದಿದ್ದರೆ ನಾನೊಬ್ಬ ಕಲಾವಿದ ಎಂದು ಅನಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಇಂದು ನನಗೆ ತಾಲ್ಲೂಕು ಆಡಳಿತ ನೀಡಿರುವ ಗೌರವ ಸನ್ಮಾನವನ್ನು ರಂಗಭೂಮಿಯ ಈ ನಾಲ್ವರು ಹಿರಿಯರಿಗೆ ಸಮರ್ಪಣೆ ಮಾಡುತ್ತೇನೆ ಎಂದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




