ತುರುವೇಕೆರೆ : ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಅಸ್ಮಿತೆ, ಶ್ರದ್ಧಾಭಕ್ತಿಯ ಕೇಂದ್ರವಾದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕ್ಷೇತ್ರದ ಮೇಲಿರುವ ಜನರ ನಂಬಿಕೆಗೆ ನೋವುಂಟು ಮಾಡುತ್ತಿರುವವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಪ್ರತಿಭಟನೆ ನಡೆಸಲು ತೀರ್ಮಾನಿಸಿ ಪ್ರಕಟಣೆ ಹೊರಡಿಸಿದೆ.
ಕೆಲವು ಟಿವಿ ನ್ಯೂಸ್ ಚಾನಲ್ ಗಳು, ಯೂಟ್ಯೂಬರ್ ಗಳು, ಹಿಂದೂ ಧರ್ಮ ವಿರೋಧಿ ಮನಸ್ಥಿತಿಯ ವ್ಯಕ್ತಿಗಳು ಧರ್ಮಸ್ಥಳ ಕ್ಷೇತ್ರ, ಧರ್ಮಾಧಿಕಾರಿಗಳ ಮೇಲೆ ಇಲ್ಲಸಲ್ಲದ ವಿಚಾರವನ್ನು ಮಾಧ್ಯಮದ ಮೂಲಕ ಹರಿಬಿಟ್ಟು ಧರ್ಮಸ್ಥಳದ ಪಾವಿತ್ರ್ಯತೆಗೆ, ಭಕ್ತರ ನಂಬಿಕೆಗೆ ನೋವುಂಟು ಮಾಡಿದ್ದಾರೆ. ಅಂತಹ ಧರ್ಮವಿರೋಧಿ ಯೂಟ್ಯೂಬರ್ ಗಳಿಗೆ, ನ್ಯೂಸ್ ಚಾನಲ್ ಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ, ಹಿಂದೂ ಧರ್ಮದ ನಂಬಿಕೆ ಬಲಗೊಳಿಸಲು, ಧರ್ಮ ಸಂರಕ್ಷಣೆಗೆ ಕೈಜೋಡಿಸಲು ಧರ್ಮಸ್ಥಳ ಕ್ಷೇತ್ರದ ತಾಲ್ಲೂಕಿನ ಭಕ್ತವೃಂದ ಆಗಸ್ಟ್ 19 ರಂದು ಮಂಗಳವಾರ ಕರೆ ನೀಡಿರುವ ಪ್ರತಿಭಟನೆ, ಸ್ವಯಂಪ್ರೇರಿತ ಬಂದ್ ನಲ್ಲಿ ಪಟ್ಟಣದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಮುಚ್ಚಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಭಕ್ತವೃಂದ ಕೋರಿದೆ.
ವರದಿ : ಗಿರೀಶ್ ಕೆ ಭಟ್




