—————————————————————-ಕಳ್ಳರ ಚಲನವಲನಗಳು ಸಿಸಿಟಿವಿಯಲ್ಲಿ ಸೆರೆ
ಮೊಳಕಾಲ್ಮುರು: ಹಾಡಹಗಲೇ ಜನ ಜಂಗುಳಿ ಇರುವ ಪಟ್ಟಣದ ಎಸ್ ಬಿ ಐ ಬ್ಯಾಂಕ್ ಬಳಿ ಸೋಮವಾರದಂದು ಶಿಕ್ಷಕನ ಬೈಕ್ ನಲ್ಲಿ ಇಟ್ಟಿದ್ದ 5ಲಕ್ಷ ರೂಪಾಯಿ ಹಣ ಎಗರಿಸಿ ಖತರ್ನಾಕ್ ಕಳ್ಳರು ಪರಾರಿಯಾಗಿದ್ದಾನೆ.

ತಾಲ್ಲೂಕಿನ ದೇವಸಮುದ್ರ ಹೋಬಳಿಯ ಕೋನಾಪುರ ಗ್ರಾಮದ ಪ್ರೌಢಶಾಲಾ ಶಿಕ್ಷಕ ಸೋಮಶೇಖರ್ ಹಣ ಕಳೆದುಕೊಂಡವರಾಗಿದ್ದಾರೆ.ಇವರು ಕಾರ್ಯ ನಿಮಿತ್ತ ತಮ್ಮೇನಹಳ್ಳಿಯ ಎಸ್ಬಿಐ ಶಾಖೆಯಲ್ಲಿರುವ ಖಾತೆಯಿಂದ ರೂ 1 ಲಕ್ಷ ಹಣ ಡ್ರಾ ಮಾಡಿಕೊಂಡು ಬಂದಿದ್ದ ಸೋಮಶೇಖರ್ ಪಟ್ಟಣದ ಎಸ್ಬಿಐ ಬ್ಯಾಂಕ್ ನಿಂದ ಮತ್ತೆ ಸೋಮವಾರ ರೂ.4ಲಕ್ಷ ಹಣ
ಡ್ರಾ ಮಾಡಿಕೊಂಡು ಬ್ಯಾಗ್ನಲ್ಲಿ ಹಾಕಿಕೊಂಡು ಬ್ಯಾಂಕ್ ಮುಂಭಾಗ ನಿಲ್ಲಿಸಿದ್ದ ತಮ್ಮ ಬೈಕ್ನ ಸೈಡ್ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದಾರೆ.
ಬೈಕ್ ಪಂಚರ್ ಆಗಿರುವನ್ನು ಕಂಡು ನಿಧಾನವಾಗಿ ಬೈಕ್ನ್ನು ಪಂಚರ್ ಶಾಪ್ಗೆ ತೆಗೆದುಕೊಂಡು ಹೋಗುವಾಗ ಸ್ಕೂಟಿಯಲ್ಲಿ ಎರಡು ಸಲ ಅಡ್ಡ ಬಂದ ಇಬ್ಬರು ಅಪರಿಚಿತರು ಸೈಡ್ ಬ್ಯಾಗ್ನಲ್ಲಿದ್ದ ಹಣವನ್ನು ಲಪಟಾಯಿಸಿದ್ದಾರೆ.
ಪಂಚರ್ ಅಂಗಡಿ ಬಳಿ ಬೈಕ್ ನಿಲ್ಲಿಸಿ ನೋಡಿದಾಗ ಹಣ ಕಳವು ಆಗಿರುವುದು ಗಮನಕ್ಕೆ ಬಂದಿದೆ. ಬ್ಯಾಂಕ್ ಬಳಿ ಹಣ ಲಪಟಾಯಿಸಿರುವ ವ್ಯಕ್ತಿಗಳೇ ಟಯರ್ನ ಗಾಳಿ ಬಿಟ್ಟಿದ್ದಾರೆ. ಈ ಮೂಲಕ ವ್ಯವಸ್ಥಿತವಾಗಿ ಹಿಂಬಾಲಿಸಿ ಕೃತ್ಯ ಎಸಗಿದ್ದಾರೆ ಎಂದು ಸೋಮಶೇಖರ್ ಅಳಲು ತೋಡಿಕೊಂಡರು.
ಘಟನಾ ಸ್ಥಳಕ್ಕೆ ಕೂಡಲೇ ಆಗಮಿಸಿದ ಪಿಎಸ್ ಐ ಮಹೇಶ್ ಹೊಸಪೇಟೆ ಸಿಸಿ ಟಿವಿಗಳನ್ನು ಪರಿಶೀಲನೆ ಮಾಡಿ ಕಳ್ಳರನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಪಿಎಂ ಗಂಗಾಧರ




