———————ವೈರಲ್ ಆದ ದೃಶ್ಯ
ಮೊಳಕಾಲ್ಮುರು: ಐತಿಹಾಸಕ ಪ್ರಸಿದ್ಧವಾದ ಅಶೋಕ ಶಿಲಾಶಾಸನದಲ್ಲಿ ಹಗಲೊತ್ತಿನಲ್ಲಿಯೇ ಚಿರತೆಯು ಸಾಕು ನಾಯಿಯನ್ನು ಬೇಟೆಯಾಡಿದೆ.
ಈ ಚಿರತೆಯು ಆಗಾಗ್ಗೆ ಬ್ರಹ್ಮಗಿರಿ ಬೆಟ್ಟ,ಕಾಡು ಸಿದ್ದಾಪುರ ಬೆಟ್ಟದ ತಪ್ಪಲಿನಲ್ಲಿ ಕಾಣಿಸಿಕೊಳ್ಳುತ್ತಿದ್ದು ಕುರಿ,ಮೇಕೆಗಳು ನಾಯಿಗಳನ್ನು ಬೇಟೆಯಾಡಲು ಹೊಂಚು ಹಾಕಿ ಕುಳಿತ ದೃಶ್ಯಗಳನ್ನು ಸ್ಥಳೀಯರು ಸಾಕಷ್ಟು ಬಾರಿ ಕಂಡಿದ್ದಾರೆ.
ಬುಧವಾರ ಸಂಜೆ 5 ಗಂಟೆಗೆ ಅಶೋಕ ಶಿಲಾ ಶಾಸನ ಬಳಿ ಓಡಾಡುತ್ತಿದ್ದ ನಾಯಿಯನ್ನು ಬೇಟೆಯಾಡಲು ಹೊಂಚು ಹಾಕಿ ಸಂಚು ರೂಪಿಸಿದ್ದ ಚಿರತೆಯು ಕ್ಷಣಾರ್ಧದಲ್ಲಿಯೇ ಸಾಕು ನಾಯಿಯನ್ನು ಬೇಟೆಯಾಡಿ ನಾಯಿಯನ್ನು ಹಿಡಿದು ಬೆಟ್ಟದ ಕಡೆ ತೆರಳಿದೆ.ಈ ದೃಶ್ಯವನ್ನು ಕಂಡ ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ ಈ ದೃಶ್ಯ ಇದೀಗ ಎಲ್ಲೆಡೆ ವೈರಲಾಗುತ್ತಿದೆ.
ಈ ಭಾಗದಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಚಿರತೆ ಹಾವಳಿಯಿದ್ದು ಜನರ ನಿದ್ದೆ ಗೆಡಿಸಿದೆ.ಸಾಕು ಪ್ರಾಣಿಗಳಲ್ಲದ ಯಾವುದೇ ಕ್ಷಣದಲ್ಲಿ ಮನುಷ್ಯರ ಮೇಲೆ ಎರಗಬಹುದು ಎನ್ನುವ ಭೀತಿ ಜನರಲ್ಲಿ ಕಾಡುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಚಿರತೆಯನ್ನು ಹಿಡಿದು ಮುಂದಾಗುವ ಅನಾಹುತ ತಪ್ಪಿಸಬೇಕಿದೆ.
ವರದಿ: ಪಿಎಂ ಗಂಗಾಧರ




