ಸಿರುಗುಪ್ಪ : ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಸೋಮವಾರದಂದು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿಯಿಂದ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ಅವರು ಉದ್ಘಾಟಿಸಿದರು.
ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟಿನ ತಾಲೂಕು ಅಧ್ಯಕ್ಷ ಬಿ.ಎಮ್.ಸತೀಶ್ ಅವರು ಮಾತನಾಡಿ ದೇಶದಲ್ಲಿ ನಡೆಯುತ್ತಿರುವ ಅಭಿವೃದ್ದಿ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಮಹತ್ತರವಾಗಿದೆ.
ಮಗುವಿನ ಆಳವನ್ನು ಅರಿತು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯುವಲ್ಲಿ ಅವರ ಶ್ರಮ ಬಹುಮುಖ್ಯವಾಗಿದೆ.
ಉತ್ತಮ ಸಾಧನೆಯು ಗುರುಗಳ ಆಶೀರ್ವಾದಿಂದ ದೊರೆಕಿದೆಂದು ಹೇಳಬಹುದು.
ಆದ್ದರಿಂದ ಅಂತಹ ಗುರು ಮಹೋದಯರಿಗೆ ನಾವೆಲ್ಲರೂ ನಮನಗಳನ್ನು ಸಲ್ಲಿಸುವ ಮೂಲಕ ಅವರನ್ನು ಗೌರವಿಸಬೇಕು.
ವಿದ್ಯಾರ್ಥಿ ಜೀವನದಲ್ಲಿ ಭೋದನೆಯೇ ಅತಿ ಮುಖ್ಯವಾಗಿರುತ್ತದೆ. ವಿನಯದಿಂದ ಗುರುಗಳ ಶಿಕ್ಷಣವನ್ನು ಪಡೆಯಬೇಕೆಂದು ತಿಳಿಸಿದರು.
ನಗರದ ರಾಜ ಬೀದಿಗಳಲ್ಲಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಮುದೇನೂರು ಗ್ರಾಮದ ವಿದ್ಯಾರ್ಥಿಗಳ ಡೊಳ್ಳು ವಾದನೆ ಎಲ್ಲರ ಗಮನ ಸೆಳೆಯಿತು.
ಬಳ್ಳಾರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಾದ ಮಂಜುನಾಥರೆಡ್ಡಿ ಅವರು ವಿಶೇಷ ಉಪನ್ಯಾಸ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಗುರ್ರಪ್ಪ ಅವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ತಾಲೂಕಿನಲ್ಲಿ ಉತ್ತಮ ಗುರುಗಳಾಗಿ ಆಯ್ಕೆಗೊಂಡಿರುವ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಸೇರಿದ ಶಾಲಾ ಶಿಕ್ಷಕರಿಗೆ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ ಪಾಟೀಲ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕಾಧ್ಯಕ್ಷ ಟಿ.ಹುಚ್ಚೀರಪ್ಪ, ನಗರಸಭೆ ಸದಸ್ಯ ಹೆಚ್.ಗಣೇಶ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಕರಿಬಸಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ರಮೇಶ ಸೇರಿದಂತೆ ಪ್ರಾಥಮಿಕ, ಪ್ರೌಡ ಶಾಲಾ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ




