ಸಿರುಗುಪ್ಪ : ನಗರದ ಸಿ.ಡಿ.ಪಿ.ಓ ಸಭಾಂಗಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಕಾರ್ಯಕ್ರಮ ನಿಮಿತ್ತ ಆದಿಕರ್ಮಯೋಗಿ ಅಭಿಯಾನದಡಿ ಗ್ರಾಮಮಟ್ಟದ ಮಾಸ್ಟರ್ ತರಬೇತಿ ಕಾರ್ಯಗಾರಕ್ಕೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರವರ್ಮ ಚಾಲನೆ ನೀಡಿದರು.
ನಂತರ ಮಾತನಾಡಿ ನಮ್ಮ ಬಳ್ಳಾರಿ ಜಿಲ್ಲೆಯಲ್ಲಿ ಶೇ.50ಕ್ಕೂ ಅಧಿಕ ಪರಿಶಿಷ್ಟ ಪಂಗಡ ಜನಾಂಗ ವಾಸವಿರುವ ಒಟ್ಟು 59 ಗ್ರಾಮಗಳು ಆದಿಕರ್ಮಯೋಗಿ ಅಭಿಯಾನದಡಿ ಸಮಗ್ರ ಗ್ರಾಮ ಉತ್ಕರ್ಷ ಯೋಜನೆಯಲ್ಲಿ ಆಯ್ಕೆಯಾಗಿದ್ದು, ತಾಲೂಕಿನಿಂದ ಶಾಲಿಗನೂರು, ಕರ್ಚಿಗನೂರು, ಅಕ್ಕತಂಗಿಯರಹಾಳ್, ಮಿಟ್ಟೆಸೂಗೂರು, ಹಳೇಕೋಟೆ ಸೇರಿ 5 ಗ್ರಾಮಗಳು ರಾಷ್ಟ್ರೀಯ ಮಟ್ಟದಿಂದ ಆಯ್ಕೆಯಾಗಿರುತ್ತವೆ.
ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ತರಬೇತಿ ನೀಡಿರುತ್ತಾರೆ. ಈಗ ನಾವು ನಿಮಗೆ ಗ್ರಾಮ ಮಟ್ಟದ ಮಾಸ್ಟರ್ ಟ್ರೈನಿಂಗ್(ವಿ.ಎಮ್.ಟಿ.ಎಸ್) ತರಬೇತಿ ನೀಡಿ 5 ಗ್ರಾಮಗಳ ಅಭಿವೃದ್ದಿ ಮಟ್ಟದ ರೂಪುರೇಷೆಗಳು ಹಾಗೂ ಪರಿಶಿಷ್ಟ ವರ್ಗಗಳ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಗ್ರಾಮಮಟ್ಟದಲ್ಲಿ ಸರ್ವೆ ನಡೆಸಿ ಆಯಾ ಗ್ರಾಮ ಪಂಚಾಯಿತಿಗಳಿಂದಲೂ ದೊರೆಯಬೇಕಾದ ಸೌಲಭ್ಯಗಳ ವರದಿಯನ್ನು ನೀಡಬೇಕು.
ಉದ್ದೇಶವಿಷ್ಟೇ ಗ್ರಾಮದಲ್ಲಿನ ಮೂಲಭೂತ ಸೌಲಭ್ಯಗಳಾದ ಆರೋಗ್ಯ, ಕುಡಿಯುವ ನೀರು, ರಸ್ತೆ, ಶಿಕ್ಷಣ ಸೇರಿದಂತೆ ವಿದ್ಯುತ್ ಇನ್ನಿತರ ಸಮಸ್ಯೆಗಳ ವರದಿ ತಯಾರಿಸಿ ನಮಗೆ ವರದಿ ನೀಡಿ ಆ ಗ್ರಾಮಗಳ ಶ್ರೇಯೋಭಿವೃದ್ದಿಗೆ ಸಹಕರಿಸಬೇಕೆಂದು ತಿಳಿಸಿದರು.
ತಾಲೂಕಿನಿಂದ ತರಬೇತಿ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಹೇಮಾವತಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಬಸವರಾಜ, ಸಮನ್ವಯ ಶಿಕ್ಷಣ ಸಂಯೋಜನಾಧಿಕಾರಿ ಡಾ.ವೀರೇಶ, ಹಿರಿಯ ಆರೋಗ್ಯ ನಿರೀಕ್ಷಕ ಮಹಮದ್ ಖಾಸೀಂ ಅವರಿಂದ ಎರಡು ದಿನಗಳ ಕಾಲ ತರಬೇತಿ ನೀಡಲಾಗುವುದು.
ಆದ್ದರಿಂದ ಗ್ರಾಮಲೆಕ್ಕಾಧಿಕಾರಿಗಳು, ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಸಮಗ್ರ ಗ್ರಾಮದ ಅಭಿವೃದ್ದಿಗೆ ಅನುಕೂಲವಾಗುವ ತರಬೇತಿಯನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ.




