ತುರುವೇಕೆರೆ: ಸಾಹಸಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆಯಾಗಿರುವ ಹಿನ್ನೆಲೆ ತಾಲೂಕು ವಿಷ್ಣು ಸೇನಾ ಸಮಿತಿ ಸಂತಸ ವ್ಯಕ್ತಪಡಿಸಿದೆ.
ಮಾಧ್ಯಮದೊಂದಿಗೆ ಮಾತನಾಡಿದ ವಿಷ್ಣು ಸೇನಾ ಸಮಿತಿ ತಾಲೂಕು ಅಧ್ಯಕ್ಷ ಟಿ.ಎಸ್. ಕೃಷ್ಣಮೂರ್ತಿ, ಕನ್ನಡ ನಾಡು ನುಡಿ, ಕಲೆ, ಸಂಸ್ಕೃತಿಗೆ ಡಾ.ವಿಷ್ಣುವರ್ಧನ್ ಅವರ ಕೊಡುಗೆ ಅಪಾರವಾದುದು. ಅವರ ಕಲಾ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಬಹಳ ಸಂತೋಷವನ್ನು ಉಂಟು ಮಾಡಿದೆ ಎಂದರು.
ಡಾ.ವಿಷ್ಣುವರ್ಧನ್ ಅವರು 220 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿ ಅಭಿಮಾನಿಗಳಿಂದ ಹಲವಾರು ಬಿರುದು ಪ್ರಶಸ್ತಿಗೆ ಪಾತ್ರರಾಗಿದ್ದರು. ಆದರೆ ಕನ್ನಡ ಕಲಾಸೇವೆಗೆ ಸರ್ಕಾರದಿಂದ ಯಾವುದೇ ಪ್ರಶಸ್ತಿ ದೊರತಿರಲಿಲ್ಲ. ಇದು ಅಭಿಮಾನಿಗಳಿಗೆ ಬಹಳ ನೋವುಂಟು ಮಾಡಿತ್ತು. ಈಗ ಸರ್ಕಾರ ವಿಷ್ಣುವರ್ಧನ್ ಅವರ 75 ನೇ ವರ್ಷದ ಜನ್ಮದಿನದ ಸಂಭ್ರಮದಲ್ಲಿ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿರುವುದು ಅಭಿಮಾನಿಗಳ ಸಂತೋಷವನ್ನು ದುಪ್ಪಟ್ಟು ಮಾಡಿದೆ ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದೆ ಬಿ.ಸರೋಜಾದೇವಿ ಅವರಿಗೂ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವುದು ಖುಷಿ ತಂದಿದೆ ಎಂದರು.
ಕನ್ನಡ ನಾಡಿನ ಇಬ್ಬರು ಹಿರಿಯ ಕಲಾವಿದರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿರುವ ರಾಜ್ಯ ಸರ್ಕಾರಕ್ಕೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ, ರಾಜ್ಯ ಸಚಿವ ಸಂಪುಟಕ್ಕೆ ವಿಷ್ಣು ಸೇನಾ ಸಮಿತಿ ವತಿಯಿಂದ ಧನ್ಯವಾದಗಳನ್ನು ಅರ್ಪಿಸುವುದಾಗಿ ಹೇಳಿದರು.
ವರದಿ: ಗಿರೀಶ್ ಕೆ ಭಟ್




