ತುರುವೇಕೆರೆ : ಬರವಣಿಗೆಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಲ್ಲದೆ ತನಗೆ ಜನ್ಮಕೊಟ್ಟ ನೆಲದ ಋಣವನ್ನೂ ತೀರಿಸಿದ ಸಾಹಿತಿ ಎಸ್.ಎಲ್.ಭೈರಪ್ಪ ಎಂದು ವೈದ್ಯ ಡಾ.ನಾಗರಾಜ್ ತಿಳಿಸಿದರು.
ಪಟ್ಟಣದ ಕನ್ನಡ ಭವನದಲ್ಲಿ ಸ್ಥಳೀಯ ಕಸಾಪ ಘಟಕ ಹಮ್ಮಿಕೊಂಡಿದ್ದ ಎಸ್.ಎಲ್. ಭೈರಪ್ಪನವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದ ಅವರು, ಸಾಹಿತಿಯೆಂದರೆ ಕೇವಲ ಪುಸ್ತಕ ಬರೆದು ಪ್ರಕಟಿಸುವುದಲ್ಲ. ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿ ಬಹಳ ಮುಖ್ಯ. ತಮ್ಮ ಕಾದಂಬರಿ, ಲೇಖನದಲ್ಲಿ ಮಾತ್ರ ಸಾಮಾಜಿಕ ಜವಾಬ್ದಾರಿ, ಸಮಾಜ ಹೇಗಿರಬೇಕೆಂದು ವಿಶ್ಲೇಷಣೆ ಮಾಡಿದರೆ ಸಾಲದು, ಸ್ವತಃ ತಾವು ಆ ರೀತಿ ನಡೆದುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪನವರು ತನಗೆ ಮನ್ನಣೆ, ಪ್ರೀತಿ ಕೊಟ್ಟ ಸಮಾಜದ ಋಣ ತೀರಿಸಿದ್ದಾರೆ, ತಮ್ಮ ಊರಿನ ಅಭಿವೃದ್ಧಿಗೆ ಕಂಕಣತೊಟ್ಟು ಕೆರೆಕಾಯಕಲ್ಪ ಮಾಡಿಸಿ ತಾವು ನುಡಿದಂತೆ ನಡೆಯುವ ವ್ಯಕ್ತಿ ಎಂಬುದನ್ನು ಸಾರಿದ್ದಾರೆ. ಎಸ್.ಎಲ್.ಭೈರಪ್ಪ ಶ್ರೇಷ್ಠ ಸಾಹಿತಿ ಮಾತ್ರ ಅಲ್ಲ ಸಮುದಾಯದ ಹಿತಚಿಂತಕರಾಗಿ ಸಮಾಜದಲ್ಲಿ ಬಹುದೊಡ್ಡ ಸ್ಥಾನ ಪಡೆದಿದ್ದಾರೆಂದರು.
ಬರಹಗಾರ ತುರುವೇಕೆರೆ ಪ್ರಸಾದ್ ಭೈರಪ್ಪನವರ ಜೀವನಾದರ್ಶಗಳ ಬಗ್ಗೆ ಮಾತನಾಡಿ ‘ತತ್ವಶಾಸ್ತ್ರಕ್ಕಿಂತ ಮಾನವನ ಸಂವೇದನೆಗಳು, ಭಾವನೆ ಅನುಭವಗಳೇ ಶ್ರೇಷ್ಠವಾದದ್ದು ಎಂಬುದನ್ನು ಕಂಡುಕೊಂಡ ಭೈರಪ್ಪನವರು ತಮ್ಮ ಅಪಾರ ಅನುಭವದ ಹಿನ್ನಲೆಯಲ್ಲಿ ಶ್ರೇಷ್ಠ ಕೃತಿಗಳನ್ನು ಈ ನಾಡಿಗೆ ನೀಡಿದ್ದಾರೆ. ಜನರ ಬದುಕಿನ ಕಷ್ಟ ಕಾರ್ಪಣ್ಯಗಳು, ದಟ್ಟವಾದ ಆರ್ದ್ರ ಸಂತೃಪ್ತಿಗಳನ್ನೇ ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ದಾಖಲಿಸಿ ಜನರ ಕಲ್ಪನೆಯನ್ನು ಹಿಗ್ಗಿಸಿ ಅವರಿಗೇ ಕೊಟ್ಟಿದ್ದಾರೆ. ಹಾಗಾಗಿ ಅವರ ಕಾದಂಬರಿಗಳು ಜನರಿಗೆ ಇಷ್ಟವಾಗುತ್ತವೆ ಎಂದರು.
ಕಸಾಪ ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ, ಅಧ್ಯಕ್ಷ ಡಿ.ಪಿ.ರಾಜು, ಉಪಾಧ್ಯಕ್ಷ ಎಂ.ಆರ್. ಪರಮೇಶ್ವರಸ್ವಾಮಿ, ನಗರ ಘಟಕದ ಅಧ್ಯಕ್ಷ ವಿ.ಎನ್.ನಂಜೇಗೌಡ, ಪ್ರೊ. ಕೆ. ಪುಟ್ಟರಂಗಪ್ಪ, ಪ್ರೊ. ಗಂಗಾಧರ ದೇವರಮನೆ, ಲ. ಪರಮೇಶ್, ರೂಪಶ್ರೀ ವಿಶ್ವನಾಥ್, ಗಿರೀಶ್ ಆಚಾರ್, ಭಾರತಿ, ದೇವಮ್ಮ ಶಂಕರಪ್ಪ, ವಿಜಯಕುಮಾರ್, ವಿಶ್ವಾರಾಧ್ಯ, ಎಸ್.ಎಂ.ಕುಮಾರಸ್ವಾಮಿ, ತಂ.ಪಾ.ಚಂದ್ರಕೀರ್ತಿ, ಸತೀಶ್, ರಾಮಚಂದ್ರು, ಎಚ್.ಆರ್.ರಂಗನಾಥ್ ಇತರರು ಭೈರಪ್ಪನವರ ಕುರಿತು ಮಾತನಾಡಿ ಶ್ರದ್ಧಾಂಜಲಿ ಸಲ್ಲಿಸಿದರು.
ವರದಿ: ಗಿರೀಶ್ ಕೆ ಭಟ್




