ಸಿರುಗುಪ್ಪ: ತಾಲೂಕಿನ ಟಿ. ರಾಂಪುರ ಗ್ರಾಮದಲ್ಲಿ ಗ್ರಾಮದೇವತೆ ಶಾಂಭವಿ ದೇವಸ್ಥಾನದಲ್ಲಿ ಪುರಾಣ ಪ್ರವಚನ ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಶನಿವಾರ ಆಯೋಜನೆ ಮಾಡಲಾಗಿತ್ತು. ಗ್ರಾಮದಲ್ಲಿ ವಿಶೇಷವಾಗಿ ಮಹಿಳೆಯರಿಂದ ರಥೋತ್ಸವ ಎಳೆದಿರುವ ದೃಶ್ಯ ಕಂಡುಬಂತು.
ಇನ್ನು ರಥೋತ್ಸವದಲ್ಲಿ ಶ್ರೀ ಅಭಿನವ ಮಹಾಂತೇಶ್ವರ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಂತರ ಮಾತನಾಡಿದ ಶ್ರೀಗಳು, ಪುರಾತನ ಕಾಲದಿಂದಲೂ ನಮ್ಮ ಹಿಂದೂ ಧರ್ಮದಲ್ಲಿ ಪುರಾಣ, ಪ್ರವಚನ, ಆಧ್ಯಾತ್ಮಿಕ ಚಿಂತನೆಗಳಿಗೆ ರಾಜ ಮಹರಾಜರ ಕಾಲದಿಂದಲೂ ಐತಿಹಾಸಿಕ ಹಿನ್ನಲೆಯಿದೆ.
ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ, ಪ್ರಜೆಗಳ ಹಿತಕ್ಕಾಗಿ, ಕೋಟೆಕೊತ್ತಲುಗಳಲ್ಲಿ ಶ್ರೀದೇವಿಯನ್ನು ಶರನ್ನವರಾತ್ರಿಯಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಇಷ್ಟಾರ್ಥ ಫಲಿಸಿಕೊಂಡ ಅನೇಕ ಉದಾಹರಣೆಗಳಿವೆ ನಮ್ಮಲ್ಲಿವೆ. ನವರಾತ್ರಿಗಳಲ್ಲಿ ಶ್ರೀದೇವಿಯು ೯ ದಿನಗಳಲ್ಲಿ ವಿವಿಧ ರೀತಿಯಲ್ಲಿ ಅವತಾರಗಳಿಂದ ದುಷ್ಟರ ನಿಗ್ರಹ ಮಾಡಿ ಭಕ್ತರ ಇಷ್ಟಾರ್ಥ ನೆರವೇರಿಸಿದ್ದಾಳೆ ಎಂದರು.
ಗ್ರಾಮದ ಒಳಿತಿಗಾಗಿ ಪಲ್ಲಕ್ಕಿ ಉತ್ಸವ ಮನೆಮನೆಗೆ ತೆರಳಿ ದಿವ್ಯದರ್ಶನ ನೀಡಿತು. ರಥೋತ್ಸವದಲ್ಲಿ ನಂದಿಕೋಲು ಡೊಳ್ಳು ಕುಣಿತ, ಭಜನೆ ಮೆರವಣಿಗೆಯು ರಥೋತ್ಸವದಲ್ಲಿ ಮತ್ತಷ್ಟು ಮೆರುಗು ತಂದಿತ್ತು.




