———————————————–ತೋಟಗಾರಿಕೆ ಇಲಾಖೆ ಹುದ್ದೆಗಳ ಭರ್ತಿ
ಇಂಡಿ: ತೋಟಗಾರಿಕೆ ಇಲಾಖೆಯಲ್ಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸರಕಾರ ಹೊರಡಿಸಿದ ಹೊಸ ನಿಯಮದಿಂದಾಗಿ ಇಲಾಖೆಯ 10 ತಿಂಗಳ ತರಬೇತಿ ಪಡೆದ ರೈತರ ಮಕ್ಕಳಿಗೆ ಅನ್ಯಾಯವಾಗಿದ್ದು, ಸರಕಾರ ನಿಯಮವನ್ನು ಸಡಿಲಿಸಿ ತರಬೇತಿ ಪಡೆದ ರೈತರ ಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ತರಬೇತಿ ಪಡೆದ ರೈತರ ಮಕ್ಕಳು ತೋಟಗಾರಿಕೆ ಇಲಾಖೆ ನಿರ್ಧೇಶಕರಿಗೆ ಮನವಿ ಮಾಡಿದರು.
ಇಂಡಿ ಶಾಸಕ ಯಶವಂತರಾಯಗೌಡ ಉಪಸ್ಥಿತಿಯಲ್ಲಿ ವಿಧಾನ ಪರಿಷತ್ ನಾಯಕ ಚೆಲುವಾದಿ ನಾರಾಯಣಸ್ವಾಮಿ ಅವರಿಗೂ ಹಾಗೂ ತೋಟಗಾರಿಕೆ ಇಲಾಖೆಯ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ ಅವರಿಗೂ ಮನವಿ ಸಲ್ಲಿಸಲಾಯಿತು. ಸರಕಾರದ ಮೊದಲಿನ ನಿಯಮದ ಪ್ರಕಾರ ತೋಟಗಾರಿಕೆ ಇಲಾಖೆಯಲ್ಲಿ ತೋಟಗಾರಿಕೆ ಸಹಾಯಕ ಹುದ್ದೆಗಳ ಭರ್ತಿಗೆ ಇಲಾಖೆಯ 10 ತಿಂಗಳ ತರಬೇತಿ ಹಾಗೂ ಪಿಯುಸಿ ತೇರ್ಗಡೆ ಹೊಂದಿರಬೇಕೆಂಬ ನಿಯಮವಿತ್ತು.

ಆದರೆ ಇದೀಗ ಸರಕಾರ ನಿಯಮವನ್ನು ಬದಲಾಯಿಸಿ ತೋಟಗಾರಿಕೆ ವಿಷಯದಲ್ಲಿ ಬಿಎಎಸ್ ಸಿ ಪದವಿ ಪಡೆದವರು ಅರ್ಹರು ಎಂದು ಆದೇಶ ಹೊರಡಿಸಿದೆ. ಇದರಿಂದ 10 ತಿಂಗಳ ತರಬೇತಿ ಪಡೆದ ರೈತರ ಮಕ್ಕಳಾದ ನಮಗೆ ಅನ್ಯಾಯವಾಗಿದೆ ಎಂದು ತರಬೇತಿ ಪಡೆದ ವಿದ್ಯಾರ್ಥಿಗಳು ಮನವಿಯಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಲ್ಲದೇ ಕಳೆದ 5 ವರ್ಷಗಳಲ್ಲಿ ಕೇವಲ 200 ಗಾರ್ಡನರ್ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದ್ದು, ಇನ್ನು ಹಲವಾರು ಹುದ್ದೆಗಳು ಇಲಾಖೆಯಲ್ಲಿ ಖಾಲಿ ಇವೆ. ಹೊಸ ಹುದ್ದೆಗಳನ್ನು ತುಂಬುವ ಸಮಯದಲ್ಲಿ 10 ತಿಂಗಳ ತರಬೇತಿ ಪಡೆದ ತಮ್ಮನ್ನೂ ಪರಿಗಣಿಸಬೇಕು. ಅರ್ಜಿ ಸಲ್ಲಿಸಲು ಅವಕಾಶ ದೊರೆಯಬೇಕೆಂದು ಮನವಿ ಮಾಡಲಾಯಿತು.




