ಸಿರುಗುಪ್ಪ: ನಗರದ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ, ನಗರಸಭೆ, ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ಸಂತ, ದಾಸಶ್ರೇಷ್ಟ ಶ್ರಿ ಕನಕದಾಸರ 538ನೇ ಜಯಂತ್ಯೋತ್ಸವ ಸಮಾರಂಭವನ್ನು ಶಾಸಕ ಬಿ.ಎಮ್.ನಾಗರಾಜ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ದಾರ್ಶನಿಕರನ್ನು ಆಯಾ ಕುಲಗಳಿಗೆ ಆಯ್ಕೆ ಮಾಡಿಕೊಂಡಿರುವುದನ್ನು ದುರದೃಷ್ಟಕರವೆಂದು ಹೇಳಬಹುದಾಗಿದೆ. ಸಂತರು, ದಾಸರು, ಆದರ್ಶ ಪುರುಷರು ಇಡೀ ಮಾನವ ಜನಾಂಗಕ್ಕೆ ಗುರುಗಳಾಗಿರುತ್ತಾರೆ. ಆದ್ದರಿಂದ ನಾವೆಲ್ಲರೂ ಅವರಿಗೆ ಗೌರವ ಸಲ್ಲಿಸುವ ಮೂಲಕ ಅವರ ತತ್ವಾದರ್ಶನಗಳನ್ನು ಪಾಲಿಸಿಕೊಂಡು ಹೋಗಬೇಕಿದೆಂದು ತಿಳಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷೆ, ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಮಾತನಾಡಿ ಭಕ್ತಿಗೆ ಹೆಸರಾದ ನಮ್ಮ ಕನಕದಾಸರು ಕತ್ತಿ, ಘುರಾಣಿಗಳಿಂದ ನಡೆಯುವ ಯುದ್ದಗಳನ್ನು ತೊರೆದು ಸಮಾಜದಲ್ಲಿ ಉಂಟಾಗುವ ಅಡೆತಡೆಗಳನ್ನು ಹೋಗಲಾಡಿಸಲು ಭಕ್ತಿಯ ಮಾರ್ಗವೆಂದು ತಿಳಿದಿದ್ದ ಅವರು ಎಲ್ಲರಿಗೂ ಭಕ್ತಿಯಿಂದ ದೊರೆಯುವ ಸಮಾನತೆಯ ಹಾದಿಯನ್ನು ಹಿಡಿದರು ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಸರ್ವ ಧರ್ಮೀಯ ಸಂಘದ ಗೌರವಾಧ್ಯಕ್ಷ ಬಿ.ಎಮ್.ಸತೀಶ ಅವರು ಮಾತನಾಡಿ 15ನೇ ಶತಮಾನದ ದಾಸ ಪರಂಪರೆಯಲ್ಲಿ ಹಲವಾರು ದಾಸ ಪಂಡಿತರಿದ್ದರು. ಜಾತಿ ಪದ್ದತಿಗಳ ವಿರುದ್ದ ತಮ್ಮ ದಾಸ ಸಾಹಿತ್ಯದ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸಿದ ಶ್ರೀ ಕನಕದಾಸರು ಇಂದಿಗೂ ಜನಮಾನಸದಲ್ಲಿದ್ದಾರೆಂದರು.
ಸಮಾಜ ಸೇವಕ ಟಿ.ಧರಪ್ಪ ನಾಯಕ ಮಾತನಾಡಿ ಕನಕದಾಸರೆಂದರೆ ಪ್ರೀತಿ, ಸಮಾನತೆ, ಹಾಗೂ ಭಗವಂತನು ಎಲ್ಲರಲ್ಲೂ ಇದ್ದಾರೆಂದು ದೇವರ ಇರುವಿಕೆಯನ್ನು ಸಮಾಜಕ್ಕೆ ಗೊತ್ತುಪಡಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆಂದರು.
ಕಾರ್ಯಕ್ರಮದಲ್ಲಿ ಕನಕದಾಸರ ಜೀವನ ಚರಿತ್ರೆಯ ವಿಶೇಷ ಉಪನ್ಯಾಸ ನೀಡಿದ ಯು.ಚಂದ್ರಶೇಖರ ವಕೀಲರು ಪದಗಳಿಗೆ ಸಿಗದ, ಸಾಹಿತ್ಯಕ್ಕೆ ನಿಲುಕದ, ಸಮಾಜದ ಉದ್ದಾರಕ್ಕಾಗಿ ಸಿರಿತನವನ್ನು ಬಿಟ್ಟುಕೊಟ್ಟು ಭಕ್ತಿಯ ಮಾರ್ಗದ ಮೂಲಕ ಮೇಲು ಕೀಳರಿಮೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ ಸಂತ ದಾಸ ಶ್ರೇಷ್ಟರಾಗಿದ್ದಾರೆಂದು ವಿವರಿಸಿದರು.
ಕೈವಲ್ಯಾನಂದ ಸ್ವಾಮೀಜಿ ಮತ್ತು ತಾಲೂಕು ಕುರುಬರ ಸಂಘದ ಅಧ್ಯಕ್ಷ ದಮ್ಮೂರು ಸೋಮಪ್ಪ ಮಾತನಾಡಿದರು. ತಾಲೂಕು ಕ್ರೀಡಾಂಗಣದಿಂದ ಕಾರ್ಯಕ್ರಮದ ವೇದಿಕೆಯವರೆಗೂ ಕನಕದಾಸರ ಬೃಹತ್ ಭಾವಚಿತ್ರಗಳ ಮೆರವಣಿಗೆ ನಡೆಯಿತು.
ಸುಮಂಗಳೆಯರು ಕಳಸವನ್ನು ಹೊತ್ತು ನಡೆದು ಮೆರುಗು ತಂದರೆ, ಚಿಣ್ಣರು ಮಹನೀಯರ ವೇಷಭೂಷಣಗಳನ್ನು ತೊಟ್ಟು ಮೆರವಣಿಗೆಯಲ್ಲಿ ನೆರೆದವರನ್ನು ಆಕರ್ಷಿಸಿದರು. ಇದೇ ವೇಳೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಲ್ಲಿಕಾರ್ಜುನ. ನಗರಸಭೆ ಸದಸ್ಯ ಹೆಚ್.ಗಣೇಶ, ತಾಲೂಕು ಕುರುಬರ ಸಂಘದ ಕಾರ್ಯದರ್ಶಿ ಎನ್.ಕರಿಬಸಪ್ಪ, ಸೇರಿದಂತೆ ಸರ್ವಧರ್ಮೀಯ ಪದಾಧಿಕಾರಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ




