ಸಿರುಗುಪ್ಪ: ಈ ಭಾಗದ ವರದಾನ ಹಾಗೂ ಜೀವನದಿಯಾಗಿರುವ ತುಂಗಾಭದ್ರ ನದಿಗೆ ಅಡ್ಡಲಾಗಿ ಕಟ್ಟಿರುವ ತುಂಗಾಭದ್ರ ಜಲಾಶಯವು ಈಗಾಗಲೇ ಅಭದ್ರತೆಯಲ್ಲಿರುವ ಕಾರಣ ಅನ್ನದಾತರು ಎರಡನೇ ಬೆಳೆಯನ್ನ ತ್ಯಾಗಮಾಡಬೇಕೆಂದು ಈ ಭಾಗದ ರೈತರಲ್ಲಿ ಮನವಿ ಮಾಡಿಕೊಳ್ಳುವುದಾಗಿ ಶಾಸಕ ಬಿ.ಎಮ್.ನಾಗರಾಜ ಅವರು ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಸಂತ, ದಾಸಶ್ರೇಷ್ಟ ಶ್ರಿ ಕನಕದಾಸರ 538ನೇ ಜಯಂತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಸುಧೀರ್ಘವಾಗಿ ಮಾತನಾಡಿದ ಅವರು ರೈತರನ್ನು ನಷ್ಟದಲ್ಲಿ ದೂಡುವ ಉದ್ದೇಶ ನಮಗಾಗಲೀ ನಮ್ಮ ಸರ್ಕಾರಕ್ಕೆ ಇಲ್ಲ.
ನಮ್ಮ ಭಾಗದ ರೈತರಿಗೆ ಅನ್ಯಾಯವಾಗದಂತೆ ನಮ್ಮ ಕೈಲಾದಷ್ಟು ಒತ್ತಡವನ್ನು ನಾವು ಹಾಕಿದ್ದೇವೆ. ಆದರೆ ನೀರಾವರಿ ತಜ್ಞರು ಗೇಟ್ ಅಳವಡಿಕೆ ಕಾರ್ಯ ವಿಳಂಬವಾದಷ್ಟು ಜಲಾಶಯಕ್ಕೆ ಧಕ್ಕೆಯಾಗುವುದಾಗಿ ತಿಳಿಸಿದ್ದಾರೆ. ಕಳೆದ ಸಲ ಒಂದು ಗೇಟ್ ಅಳವಡಿಕೆ ಸಾಕಷ್ಟು ಕಷ್ಟ ಪಡಬೇಕಾಯಿತು.
ತುಂಗಾಭದ್ರ ಜಲಾಶಯದ ಭದ್ರತೆಯ ನಿರ್ಧಾರ ಕೇವಲ ನಮ್ಮ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ. ನೆರೆಯ ಆಂದ್ರಪ್ರದೇಶ, ತೆಲಂಗಾಣದ ಸಹಮತ ಬೇಕಿದೆ. ಏಕೆಂದರೆ ಅವರು ಸಹ ನೀರಾವರಿ ಹಂಚಿಕೆ ಹಾಗೂ ಜಲಾಶಯದ ಭದ್ರೆಯಲ್ಲಿ ಪಾಲುದಾರರಾಗಿತ್ತಾರೆ. ಆದ್ದರಿಂದ ಕೇಂದ್ರ ಸರ್ಕಾರ ನೀಡುವ ನಿರ್ದೇಶನದಂತೆಯೂ ನಾವು ನಡೆದುಕೊಳ್ಳಬೇಕಾಗುತ್ತದೆ.
ಗೇಟ್ ಅಳವಡಿಕೆಗೆ ಈಗಾಗಲೇ ಕಂಪನಿಯೊಂದಕ್ಕೆ 54 ಕೋಟಿ ರೂಪಾಯಿಗಳ ಟೆಂಡರ್ ಮಾಡಿ ಒಪ್ಪಂದವನ್ನು ಸರ್ಕಾರವು ಮಾಡಿಕೊಂಡಿರುತ್ತದೆ. ಅವರಿಗೆ ಅನುಕೂಲವಾಗುವ ರೀತಿಯಲ್ಲಿ ನೀರನ್ನು ಬಿಡುಗಡೆ ಮಾಡಿ ಅವರಿಗೆ ಅಣೆಕಟ್ಟು ಆ ಕಂಪನಿಯ ಸುಪರ್ದಿಗೆ ಕೊಡಬೇಕಾಗುತ್ತದೆ.
ಕಾರಣವಿಷ್ಟೇ ತಲಾತಲಾಂತರ ನಮ್ಮ ಅಣೆಕಟ್ಟಿನಲ್ಲಿ ನೀರು ಹರಿಯಬೇಕೆಂದರೆ ಅದು ಸುರಕ್ಷತೆಯಾಗಿರಬೇಕು. ಕಾರಣ ನಾವೆಲ್ಲರೂ ಒಂದು ಬೆಳೆಯನ್ನು ತ್ಯಾಗಮಾಡಬೇಕಿದೆಂದು ತಿಳಿಸಿದರು.
ವರದಿ : ಶ್ರೀನಿವಾಸ ನಾಯ್ಕ




