—————————————-ಸಾಮೂಹಿಕ ಶ್ರೀ ನವದುರ್ಗ ಪೂಜೆ
ಚೇಳೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣಕ್ಕೆ ದೊಡ್ಡ ಕೊಡುಗೆ ನೀಡಿದ್ದು, ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗುತ್ತಿರುವುದು ಶ್ಲಾಘನೀಯ. ಸಾಮೂಹಿಕ ಶಕ್ತಿಯಿಂದ ಮಾತ್ರ ಸಮಾಜದಲ್ಲಿ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ತಹಸೀಲ್ದಾರ್ ಶ್ವೇತಾ ಬಿ.ಕೆ. ನುಡಿದರು.
ತಾಲೂಕಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಮಂಗಳವಾರ ಆಯೋಜಿಸಲಾಗಿದ್ದ ಸಾಮೂಹಿಕ ಶ್ರೀ ನವದುರ್ಗ ಪೂಜೆ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀ ಎಂದರೆ ಶಕ್ತಿ ಎಂದು ಬಣ್ಣಿಸಿದ ಅವರು, ಈ ಸಂಘದಿಂದ ಸಹಸ್ರಾರು ಮಂದಿ ಸಹಾಯ ಪಡೆದಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದರೆ ಪ್ರತಿಯೊಂದು ಕಾರ್ಯವೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಉತ್ತಮ ಆರೋಗ್ಯ, ಐಶ್ವರ್ಯ ಲಭಿಸಲಿ ಎಂದು ಪ್ರಾರ್ಥಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಜೆ.ಕೆ. ಆನಂದ ಮಾತನಾಡಿ, ಧರ್ಮವನ್ನು ಕಾಪಾಡುವ ಮಹತ್ವದ ಸಂಘ ಇದಾಗಿದೆ. ಈ ಸಂಘದ ಮೂಲಕ ಮಹಿಳೆಯರು ಸಾಲ ಪಡೆದು ಸ್ವಂತ ಉದ್ಯೋಗಗಳನ್ನು ಪ್ರಾರಂಭಿಸಿ, ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುವ ಮಹತ್ವದ ಯೋಜನೆ ಇದಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಚೇಳೂರು ಎಎಸ್ಐ ಶ್ರೀನಿವಾಸ್ ಅವರು ಮಾತನಾಡಿ, ರಾತ್ರಿ ಸಮಯದಲ್ಲಿ ಆಚೆ ಕಟ್ಟುವ ಜಾನುವಾರುಗಳ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸುವುದು ಮುಖ್ಯ ಎಂದು ಸಲಹೆ ನೀಡಿದರು. ಇದೇ ವೇಳೆ, ಸೈಬರ್ ಕ್ರೈಂ ಬಗ್ಗೆ ವಿವರಣೆ ನೀಡಿ, ಸಾರ್ವಜನಿಕರು ಯಾವುದೇ ಕಾರಣಕ್ಕೂ ಮೋಸದ ಜಾಲಕ್ಕೆ ಬಲಿಯಾಗಬಾರದು ಎಂದು ಜಾಗೃತಿ ಮೂಡಿಸಿದರು.
ಸಭಾ ಕಾರ್ಯಕ್ರಮದ ಭಾಗವಾಗಿ ಪುಟ್ಟ ಮಗು ಉಚಿತ ಶ್ರೀ ಅವರಿಂದ ಮನಮೋಹಕ ಭರತನಾಟ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಮಾರಂಭದಲ್ಲಿ ಆರ್ಐ ಈಶ್ವರ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೌಸ್ತರ್, ಬಾಗೇಪಲ್ಲಿ ಯೋಜನಾಧಿಕಾರಿ ಪ್ರವೀಣ್,ಎಂ ವಿ ನರಸಿಂಹ ರೆಡ್ಡಿ, ಮೇಲ್ವಿಚಾರಕರಾದ ರಾಧಿಕಾ, ಮತ್ತು ಸಂಘದ ಸೇವಾಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.
ವರದಿ :ಯಾರಬ್. ಎಂ.




