—————————ನಿಪ್ಪಾಣಿ: ವೀರೇಂದ್ರ ಹೆಗ್ಗಡೆಯವರ ಜನ್ಮ ದಿನ ಪ್ರಯುಕ್ತ
——————————–ಮಕ್ಕಳಿಗೆ ಪೂಜ್ಯರ ಆದರ್ಶ ಜೀವನ ಅನುಸರಿಸಲು ಸಲಹೆ
ಧರ್ಮಸ್ಥಳದ ಧರ್ಮ ಅಧಿಕಾರಿ ಪರಮಪೂಜ್ಯ ವೀರೇಂದ್ರ ಹೆಗಡೆಯವರ ಆದರ್ಶ ಜೀವನ ತತ್ವಗಳನ್ನು ಮಕ್ಕಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶರಾಗಿ ಹೊರಹೊಮ್ಮ ಬೇಕೆಂದು ಹಿರಿಯ ನ್ಯಾಯವಾದಿ ಶ್ರೀಪಾಲ ಮುನ್ನೊಳೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕ ಹಾಗೂ ನಿಪ್ಪಾಣಿ 2 ಯೋಜನಾ ಕಚೇರಿ ಸಿಬ್ಬಂದಿ ಬಳಗದ ಸಂಯುಕ್ತಾಶ್ರಯದಲ್ಲಿಹಮ್ಮಿಕೊಂಡ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯಶ್ರೀ ಪದ್ಮ ವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಯವರ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಮಕ್ಕಳಿಗೆ ಶಾಲಾ ಸಾಹಿತ್ಯ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಿ ಮಾತನಾಡಿದರು.
ಸಮಾರಂಭದಲ್ಲಿ ವಲಯ ಮೇಲ್ವಿಚಾರಕರಾದ ಶ್ರೀ ಸಿದ್ದಣ್ಣ ಕಟ್ಟಿಕರ ಸರ್ವರನ್ನು ಸ್ವಾಗತಿಸಿದರು. ನಂತರ ದೀಪ ಪ್ರಜ್ವಲನೆ , ಆರತಿ ಬೆಳಗಿಸುವ ದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿ ಸಕಲ ವೇದಿಕೆಯ ಪರವಾಗಿ ಪೂಜ್ಯರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ನಿರ್ದೇಶಕರಾದ ಶ್ರೀ ವಿಠ್ಠಲ್ ಸಾಲಿಯಾನ್ ಸರ್ ಇವರು ಪೂಜ್ಯರ ಜೀವನ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಇವತ್ತಿನ ಯುವಕರು ಅನುಕರಣೆ ಮಾಡಿ ಆಚರಣೆಯಲ್ಲಿ ತರಬೇಕಾಗಿ ಕೇಳಿಕೊಂಡರು. ಹಾಗೆಯೇ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಬಾಳಾಸಾಹೇಬ ಶಿಂದೆ ಇವರು ಪೂಜ್ಯರ ಸೇವೆ ಅಮೂಲ್ಯವಾಗಿದ್ದು ಸಮಾಜದ ಕಟ್ಟ ಕಡೆಯ ಘಟಕ ಕುಟುಂಬ ಹಾಗೂ ಕುಟುಂಬದ ಪ್ರತಿಯೊಬ್ಬ ಸದಸ್ಯನ ಕಣ್ಣೀರು ಒರೆಸುವ ಸೇವೆ ಪೂಜ್ಯರು ಪಾರದರ್ಶಕ ಮತ್ತು ಪ್ರಾಮಾಣಿಕವಾಗಿ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಪ್ರಸಿದ್ಧ ವಕೀಲರಾದ ಶ್ರೀಪಾಲ ಮುನ್ನೋಳೆಯವರ ಹಸ್ತದಿಂದ ಎಲ್ಲ ಮಕ್ಕಳಿಗೆ ಶಾಲಾ ಸಾಹಿತ್ಯ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಅತಿವೃಷ್ಟಿಯಿಂದ ಮನೆಯನ್ನು ಕಳೆದುಕೊಂಡ ಬೇಡಕಿಹಾಳ ಗ್ರಾಮದ ವರ್ಷಾ ಜಠಾರ ಇವರಿಗೆ ಶ್ರೀ ಕ್ಷೇತ್ರದಿಂದ ಮಂಜೂರಾದ ಪ್ರಸಾದ ಸ್ವರೂಪದ 10 ಸಾವಿರ ರೂಪಾಯಿಗಳ ಸಹಾಯಧನವನ್ನು ನೀಡಲಾಯಿತು.
ತಾಲೂಕು ಸಂಯೋಜಕರಾದ ಮಂಜು ನಾಯ್ಕ ,ಊರಿನ ಗಣ್ಯರಾದ ದಾದಾ ಅರದಾಳೆ ಹಾಗೂ ವಸತಿ ನಿಲಯದ ಸಹಾಯಕರಾದ ಮೀಲಿಂದ ಘಾಟಗೆ , ಮಾಧ್ಯಮ ಮಿತ್ರರು ಜೊತೆಗೆ ಧರ್ಮಸ್ಥಳದ ಒಕ್ಕೂಟ ಪದಾಧಿಕಾರಿಗಳಾದ ಅಬೇದಾ ಮುಲ್ಲಾ , ರೂಪಾಲಿ ಚೌಗಲೆ , ಶ್ರೀದೇವಿ ಚೌಗುಲೆ ಸೋನಂ ಭಾಟ , ಆರತಿ ಬಂಕಾಪೂರೆ ಹಾಗೂ ಶೌರ್ಯ ತಂಡದ ಎಲ್ಲ ಸ್ವಯಂಸೇವಕರು ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




