‘ಸದ್ಭಾವನಾ ಪಾದಯಾತ್ರೆ’
ಈ ಪದದ ಅರ್ಥವೇ ವಿಶೇಷ ಹಾಗೂ ಅಲ್ಲಿ ನಡೆಯುವಂತಹ ಕಾರ್ಯ ಇನ್ನೂ ವಿಶೇಷ,
“ಹಲವು ಮಾತೇನು ನೀನೊಲಿದು ಪಾದವನಿಟ್ಟ ನೆಲವೇ ಸುಕ್ಷೇತ್ರ ,ಜಲವೇ ಪಾವನ ತೀರ್ಥ. ಎಂಬ ಶರಣರ ನುಡಿಯಂತೆ ಯೋಗಿಗಳ ಆಗಮನದಿಂದ ಇಡಿ ಕ್ಷೇತ್ರವೇ ಪಾವನವಾಯಿತು ಎಂಬ ಮಾತು ಪ್ರಚುರವಾಗಿದೆ . ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದಿರುವ ೯ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ನಿಮಿತ್ಯ ಆಗಮಿಸಿದ ಶ್ರೀ ಪರಮಪೂಜ್ಯ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು (ಸುಕ್ಷೇತ್ರ ಗವಿಮಠ ಕೊಪ್ಪಳ) ಸಾಯಂಕಾಲ ಪ್ರವಚನ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದರು. ಗವಿಸಿದ್ದೇಶ್ವರ ಅಜ್ಜನವರು ಬರುತ್ತಾರೆಂದರೆ ಜನಜಂಗುಳಿಯಾಗುವುದು ಇದರಲ್ಲಿ ಹೊಸತೇನಿಲ್ಲ .ಇದರ ಹೊರತಾಗಿ ದಿನಕ್ಕೊಂದು ಹಳ್ಳಿಗೆ ಸದ್ಭಾವನಾ ಪಾದಯಾತ್ರೆಯನ್ನು ನಸುಕಿನ ಜಾವದಲ್ಲಿ ಕೈಗೊಳ್ಳುತ್ತಿದ್ದರು. ಕಾರ್ತಿಕ ಮಾಸದ ನಡುಗುವ ಚಳಿಯಲ್ಲಿ ಸರಿಸುಮಾರು 5:30 ನಿಮಿಷದ ಮುಂಜಾವಿನಲ್ಲಿ ಸಹಸ್ರಾರು ಹಳ್ಳಿಯ ಜನರು ಪರಮಪೂಜ್ಯರು ನಮ್ಮ ಹಳ್ಳಿಗೆ ಬರುತ್ತಾರೆಂದು ಇಡೀ ಗ್ರಾಮವನ್ನೆಲ್ಲ ಶುಚಿಗೊಳಿಸಿ ರಂಗೋಲಿಯಿಂದ ಅಲಂಕಾರ ಮಾಡಿ ಆರತಿ ತಟ್ಟಿಯನ್ನು ಹಿಡಿದುಕೊಂಡು ಕಾಯುತ್ತಿದ್ದರು. ಪರಮ ಪೂಜ್ಯರು ಆಗಮಿಸಿದ ಕ್ಷಣದಿಂದ ಗ್ರಾಮದ ಬೀದಿ ಬೀದಿಗಳಲ್ಲಿ ಪಾದಯಾತ್ರೆ ಮಾಡುತ್ತಾ ಆಧ್ಯಾತ್ಮಿಕ ಗಾಯನಗಳನ್ನು ಆಲಿಸುತ್ತಾ ಅದೇ ಗ್ರಾಮದ ಸಾರ್ವಜನಿಕ ಪ್ರದೇಶದಲ್ಲಿ ಸಮಾರೋಪದ ಹಂತದಲ್ಲಿ ಒಂದು ಪ್ರವಚನದಿಂದ ಕಾರ್ಯಕ್ರಮ ಸಮಾಪ್ತಿಯಾಗುತ್ತಿತ್ತು.
ಯೋಗಿಗಳ ಆಗಮನದಿಂದ ಗ್ರಾಮಗಳು ಶುಚಿಯಾಗುತ್ತಿದ್ದು ಸ್ವಚ್ಛ ಭಾರತ ಅಭಿಯಾನದ ಕಲ್ಪನೆಗೆ ಹಿಡಿದ ಕೈಗನ್ನಡಿಯಾಗುತ್ತಿತ್ತು, ಅವರಿವರನ್ನದೆ ನೆರೆದ ಸಹಸ್ರಾರು ಭಕ್ತರ ಸಂಮಿಲನ ರಾಷ್ಟ್ರೀಯ ಭಾವೈಕ್ಯತೆಗೆ ಸಾಕ್ಷಿಯಾಗುತ್ತಿತ್ತು. ಅವರು ಗಂಟೆಗಳ ಕಾಲ ನೀಡುತ್ತಿದ್ದ ಆಧ್ಯಾತ್ಮಿಕ ರಸದೌತಣ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರುತಿತ್ತು. ನಿಜಕ್ಕೂ ಇದೊಂದು ಬದಲಾವಣೆಯ ಕ್ರಾಂತಿಯೇ ಸರಿ.
ವಿನಾಯಕ ಜಿ.ಆಸಂಗಿ
ಶಿಕ್ಷಕರು,ಹವ್ಯಾಸಿ ಲೇಖಕರು.




