ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಬಳಿ ನಡೆದ ಘರ್ಷಣೆ ಮತ್ತು ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಾಟೆಯಲ್ಲಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಳ್ಳಾರಿಗೆ ನೇಮಕವಾಗಿದ್ದ ಎಸ್ಪಿ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಲಾಗಿದೆ.
ಅಮಾನತು ಬೆನ್ನಲ್ಲೇ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗಿತ್ತು. ಇದನ್ನು ಅವರ ತಂದೆ ತಳ್ಳಿ ಹಾಕಿದ್ದಾರೆ.
ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲವೆಂದು ತಿಳಿಸಿದ್ದಾರೆ. ಕೆಲಸ ಮಾಡಿಯೂ ಅವಮಾನ ಮಾಡಿದ್ದು ಬೇಸರ ತರಿಸಿದೆ. ಪುತ್ರನ ಬಗ್ಗೆ ಸುಳ್ಳು ವಂದತಿ ಬೇಸರ ಮೂಡಿಸಿದೆ.
ಓರ್ವ ದಕ್ಷ ಅಧಿಕಾರಿ ತಂದೆಯಾಗಿ ಮನವಿ ಮಾಡುತ್ತಿದ್ದೇನೆ. ನನ್ನ ಪುತ್ರನ ಅಮಾನತು ಕುರಿತು ಸರ್ಕಾರ ಎಂದು ಮರುಪರಶೀಲಿಸಬೇಕು ಎಂದು ಅಮಾನತುಗೊಂಡ ಬಳ್ಳಾರಿ ಎಸ್ಪಿ ತಂದೆ ಉದಯಶಂಕರ್ ನೆಜ್ಜೂರ್ ಹೇಳಿದ್ದಾರೆ.
ಅವರ ಹೇಳಿಕೆ ಹೀಗಿದೆ
ನಾನು ಉದಯಶಂಕರ್ ನೆಜ್ಜೂರು, 2016ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಪವನ ನೆಜ್ಜೂರ್ ಅವರ ತಂದೆಯಾಗಿ ಕೆಲ ವಿಷಯಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಐಪಿಎಸ್ ಅಧಿಕಾರಿಯಾಗಿರುವ ನನ್ನ ಪುತ್ರ ಪವನ ನೇಜ್ಜೂರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಕಾರ್ಯಕ್ಷಮತೆ ಹಾಗೂ ಕಾನೂನು ಪಾಲನೆಗೆ ಬದ್ಧನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಹೆಮ್ಮೆ ನಮಗಿದೆ ಆದರೆ ಬಳ್ಳಾರಿಯಲ್ಲಿ ನಡೆದ ಗಲಭೆಯ ಘಟನೆ ನಂತರ ನನ್ನ ಪುತ್ರನ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿಸುತ್ತಿರುವುದು ಬೇಸರ ಮೂಡಿಸಿದೆ.
ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣದ ಸಂದರ್ಭದಲ್ಲಿ ನನ್ನ ಪುತ್ರ ಪವನ ನೆಜ್ಜೂರು ತಮ್ಮ ಜವಾಬ್ದಾರಿಯನ್ನು ಮರೆತಿಲ್ಲ ಎಂಬುವುದನ್ನು ಸ್ಪಷ್ಪಡಿಸುತ್ತ, ಜನವರಿ 1ರಂದು ಅಧಿಕಾರ ಸ್ವೀಕರಿಸಿ, ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಸುಮಾರು ಒಂದು ದಶಕ ಕಾಲ ಸೇವೆ ಸಲ್ಲಿಸಿದ್ದ ಲೋಕಾಯುಕ್ತ ಪೋಲೀಸರಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸ್ವೀಕರಿಸಿದ ನಂತರ ನಡೆದ ಈ ಅಹಿತಕರ ಘಟನೆಯ ಸ್ಥಳಕ್ಕೆ ತಕ್ಷಣವೇ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದು ಅಲ್ಲಿರುವ ಎಲ್ಲರಿಗೂ ಗೊತ್ತು.
ಶಿಸ್ತಿನ ಸಿಪಾಯಿ, ದಕ್ಷ ಅಧಿಕಾರಿ ಆಗಿರುವ ನನ್ನ ಮಗ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆಯ ಘಟನೆ ಅನಿರೀಕ್ಷಿತ. ಆದಾಗ್ಯೂ ಕಾನೂನು ಸುವ್ಯವಸ್ಥೆಯ ಪಾಲನೆಗೆ ಸಂಪೂರ್ಣವಾಗಿ ಶ್ರಮಿಸಿ ಬೆಳಗಿನ ಜಾವವೂ ಮೃತರ ಅಂತ್ಯಕ್ರಿಯೆ ಸಂದರ್ಭ ಬಂದೋಬಸ್ತ್ ವ್ಯವಸ್ಥೆ ಮಾಡಿಯೂ ಅಮಾನತಿಗೆ ಒಳಪಟ್ಟಿದ್ದು ಆತನಿಗೆ ಸಹಜವಾಗಿ ಬೇಸರ ಮೂಡಿಸಿ ಆಘಾತಕ್ಕೆ ಒಳಗಾಗಿದ್ದು ಹೌದೇ ಹೊರತು ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ.
ಈ ವಿಷಯವಾಗಿ ಕಪೋಲಕಲ್ಪಿತ ವಿಷಯಗಳು ಚರ್ಚೆ ಆಗುತ್ತಿರುವುದು ನಮಗೆ ಬೇಸರ ಹಾಗೂ ಮಗನ ಮರ್ಯಾದೆ, ಭವಿಷ್ಯದ ಬಗ್ಗೆ ಅತ್ಯಂತ ಆತಂಕ ಮೂಡಿಸಿದೆ.
ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ನನ್ನ ಪುತ್ರ ಪವನ ನೆಜ್ಜೂರ್ ಆಘಾತಕ್ಕೆ ಒಳಗಾಗಿದ್ದಾನೆ, ಅಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ, ಅದೂ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ, ಅಲ್ಲದೆ ದಕ್ಷತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದಾಗಲೂ ಅನುಭವಿಸಬೇಕಾದ ಅಮಾನತಿನ ಶಿಕ್ಷೆ ಆತನನ್ನು ಚಿಂತೆಗೀಡು ಮಾಡಿದೆ.
ಅದೇನಿದ್ದರೂ ನನ್ನ ಪುತ್ರ ಐಪಿಎಸ್ ಅಧಿಕಾರಿ ಪವನ ನೆಜ್ಜೂರ್ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಆದೇಶವನ್ನು ಶಿರಸಾ ಪಾಲಿಸಿದ್ದರಲ್ಲಿ ಅನುಮಾನವೇ ಇಲ್ಲ. ಹೀಗಾಗಿ ನನ್ನ ಪುತ್ರನ ಬಗ್ಗೆ ಅನಗತ್ಯ ಹಾಗೂ ಸುಳ್ಳು ವದಂತಿಗಳನ್ನು ಹರಡಿಸದಂತೆ ಮತ್ತು ಆಘಾತಕ್ಕೆ ಒಳಗಾಗಿರುವ ಪುತ್ರ ಪವನ ನೆಜ್ಜೂರು ಅವರಿಗೆ ಕೊಂಚ ವಿಶ್ರಾಂತಿಯ ಅಗತ್ಯ ಇದೆ ಎಂಬುವುದನ್ನು ತಮ್ಮೆಲ್ಲರ ಗಮನಕ್ಕೆ ತರುವಾಯಸುತ್ತಾ
ಓರ್ವ ದಕ್ಷ ಅಧಿಕಾರಿಯ ತಂದೆಯಾಗಿ ನಿಮ್ಮೆಲ್ಲರಲ್ಲಿ ಮನವಿಸುವದರ ಜೊತೆಗೆ ನನ್ನ ಪುತ್ರನ ಅಮಾನತು ಕುರಿತು ಸರ್ಕಾರ ಮರುಪರಿಶೀಲನೆ ನಡೆಸಲು ವಿನಮ್ರವಾಗಿ ಕೋರುತ್ತೇನೆ ಎಂದು ತಿಳಿಸಿದ್ದಾರೆ.




