ಚೇಳೂರು : ಕೇಂದ್ರದ ಗ್ರಾಮ ಪಂಚಾಯಿತಿ ಕಚೇರಿಯು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ತಾಣವಾಗುವ ಬದಲು, ಜನಪ್ರತಿನಿಧಿಗಳು ಮತ್ತು ಮಾಜಿ ಸದಸ್ಯರ ಹರಟೆ ಕಟ್ಟೆಯಾಗಿ ಮಾರ್ಪಟ್ಟಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ದಿನನಿತ್ಯ ನೂರಾರು ನಾಗರಿಕರು ವಿವಿಧ ಕೆಲಸಗಳಿಗಾಗಿ ಪಂಚಾಯಿತಿ ಕಚೇರಿಗೆ ಬರುತ್ತಾರೆ. ಆದರೆ ಕಚೇರಿಯ ಕೆಲಸದ ಸಮಯದಲ್ಲಿ ಪ್ರಸ್ತುತ ಜನಪ್ರತಿನಿಧಿಗಳು ಹಾಗೂ ಕೆಲವು ಮಾಜಿ ಸದಸ್ಯರು ಸದಾ ಅಧಿಕಾರಿಗಳ ಪಕ್ಕದಲ್ಲೇ ಬೀಡು ಬಿಟ್ಟಿರುತ್ತಾರೆ.
ಇವರು ಅಧಿಕಾರಿಗಳ ಜೊತೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಕುಳಿತಿರುವುದರಿಂದ, ದೂರದ ಊರುಗಳಿಂದ ಬರುವ ಸಾಮಾನ್ಯ ಜನರು ಅಧಿಕಾರಿಗಳನ್ನು ಮುಕ್ತವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ.
ಅಹವಾಲು ಸಲ್ಲಿಸಲು ಮುಜುಗರ: ಕಚೇರಿಯ ಒಳಗೆ ಸದಾ ರಾಜಕೀಯ ವ್ಯಕ್ತಿಗಳು ತುಂಬಿರುವುದರಿಂದ ಮಹಿಳೆಯರು, ಹಿರಿಯ ನಾಗರಿಕರು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಅಥವಾ ಗ್ರಾಮದ ಕುಂದುಕೊರತೆಗಳನ್ನು ಅಧಿಕಾರಿಗಳ ಮುಂದೆ ಹೇಳಿಕೊಳ್ಳಲು ಮುಜುಗರ ಅನುಭವಿಸುವಂತಾಗಿದೆ.
ಕಚೇರಿಯು ಸಾರ್ವಜನಿಕ ಸ್ನೇಹಿಯಾಗಿ ಇರುವ ಬದಲು ರಾಜಕೀಯ ವ್ಯಕ್ತಿಗಳ ಅಡ್ಡೆಯಂತಾಗುತ್ತಿರುವುದು ಆಡಳಿತದ ಘನತೆಗೆ ಧಕ್ಕೆ ತರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಯಂತ್ರಣಕ್ಕೆ ಒತ್ತಾಯ:
ಕೆಲಸವಿಲ್ಲದಿದ್ದರೂ ಕಚೇರಿಯಲ್ಲಿ ಕಾಲಹರಣ ಮಾಡುವವರನ್ನು ನಿಯಂತ್ರಿಸಬೇಕು. ಕಚೇರಿಯ ಕೆಲಸದ ಸಮಯದಲ್ಲಿ ಅರ್ಹ ಫಲಾನುಭವಿಗಳಿಗೆ ಮತ್ತು ಕೆಲಸವಿದ್ದವರಿಗೆ ಮಾತ್ರ ಆದ್ಯತೆ ನೀಡಬೇಕು.
ಈ ಕೂಡಲೇ ಮೇಲಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರು ಯಾವುದೇ ಭಯ ಅಥವಾ ಸಂಕೋಚವಿಲ್ಲದೆ ಅಧಿಕಾರಿಗಳನ್ನು ಭೇಟಿ ಮಾಡಲು ಸೂಕ್ತ ವಾತಾವರಣ ಕಲ್ಪಿಸಬೇಕೆಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ.
ವರದಿ :ಯಾರಬ್. ಎಂ.




