ಚೇಳೂರು: ಗ್ರಾಮೀಣ ಭಾಗಗಳಲ್ಲಿ ಬಡವರ ಬದುಕನ್ನು ಹಸಗೆಡಿಸುತ್ತಿರುವ ಅಕ್ರಮ ಮದ್ಯ ಮಾರಾಟ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದು ಚೇಳೂರು ವೃತ್ತ ನಿರೀಕ್ಷಕ ಶ್ರೀನಿವಾಸ್ ಎಂ. ತಿಳಿಸಿದರು.
ಪಟ್ಟಣದ ವೃತ್ತ ನಿರೀಕ್ಷಕರ ಕಚೇರಿಯ ಮುಂಭಾಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ದಲಿತರ ಕುಂದುಕೊರತೆಗಳ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.
ಅಕ್ರಮ ಮದ್ಯ ಮಾರಾಟಕ್ಕೆ ಮುಖಂಡರ ವಿರೋಧ:
ಸಭೆಯಲ್ಲಿ ಭಾಗವಹಿಸಿದ್ದ ದಲಿತ ಮುಖಂಡರು ಗ್ರಾಮೀಣ ಭಾಗದ ಜ್ವಲಂತ ಸಮಸ್ಯೆಗಳನ್ನು ಪಟ್ಟಿ ಮಾಡಿದರು.
ಹಳ್ಳಿಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಯುವಜನತೆ ದಾರಿ ತಪ್ಪುತ್ತಿದ್ದಾರೆ ಮತ್ತು ಕೂಲಿ ಕಾರ್ಮಿಕರ ಕುಟುಂಬಗಳು ಬೀದಿಗೆ ಬರುತ್ತಿವೆ.
ಇದನ್ನು ತಡೆಗಟ್ಟಲು ಪೊಲೀಸರು ಕಟ್ಟುನಿಟ್ಟಿನ ದಾಳಿ ನಡೆಸಬೇಕು ಎಂದು ಪ್ರತಿಯೊಬ್ಬ ಮುಖಂಡರೂ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಜಾಗೃತಿ ಮತ್ತು ಭರವಸೆ:
ಮುಖಂಡರ ಅಹವಾಲಿಗೆ ಸ್ಪಂದಿಸಿದ ವೃತ್ತ ನಿರೀಕ್ಷಕರು, ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಲು ಸಮುದಾಯದ ಸಹಕಾರ ಅಗತ್ಯ. ಮಕ್ಕಳಿಗೆ ಶಿಕ್ಷಣ ಕೊಡಿಸಿ, ಸರ್ಕಾರಿ ವಸತಿ ನಿಲಯಗಳ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ.
ಎಟಿಎಂ ವಂಚನೆಗಳ ಬಗ್ಗೆ ಎಚ್ಚರವಿರಲಿ. ಅಕ್ರಮ ಮದ್ಯ ಮಾರಾಟ ಅಥವಾ ಜೂಜಾಟ ಕಂಡುಬಂದಲ್ಲಿ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಿ, ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಸಮಾಜದಲ್ಲಿ ದಲಿತರು ಸಂಘಟಿತರಾಗಿ, ಸ್ವಾಭಿಮಾನದಿಂದ ಮತ್ತು ಗೌರವದಿಂದ ಬಾಳಬೇಕು. ಕಾನೂನಿನ ಚೌಕಟ್ಟಿನಲ್ಲಿ ನಿಮಗೆ ಸಿಗಬೇಕಾದ ಸೌಲಭ್ಯ ಮತ್ತು ರಕ್ಷಣೆಯನ್ನು ಒದಗಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಸಭೆಯ ಅಂತ್ಯದಲ್ಲಿ ಅವರು ಸಂವಿಧಾನದ ಆಶಯದಂತೆ ಜೈ ಭೀಮ್, ಜೈ ಕರ್ನಾಟಕ ಎಂದು ಘೋಷಣೆ ಕೂಗಿದರು.
ಈ ಸಭೆಯಲ್ಲಿ ಪಿಎಸ್ಐ ಸೈಯದ್ ಅನ್ಸಾರ್, ಎಎಸ್ಐಗಳಾದ ರಾಜು, ವೆಂಕಟೇಶಪ್ಪ,ಸಿಬ್ಬಂದಿ ಶಬ್ಬೀರ್, ಬೀರಣ್ಣ, ದೇವರಾಜ ಸೇರಿದಂತೆ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ.




