ಬೆಂಗಳೂರು : ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲು ಎಂಬಂತೆ ಎರಡೇ ಮಾತಿನಲ್ಲಿ ಭಾಷಣ ಮುಗಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತೆರಳಿದ್ದು, ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ತಯಾರಿಸಿದ್ದ ಭಾಷಣವನ್ನು ರಾಜ್ಯಪಾಲರು ಓದುವುದು ವಾಡಿಕೆ.ಆದರೆ, ಭಾಷಣದ ಪೂರ್ಣ ಪಠ್ಯವನ್ನು ಓದದೆ ಕೇವಲ ಒಂದು ಅಥವಾ ಎರಡು ಸಾಲುಗಳಲ್ಲಿ ಮುಗಿಸಿ ಹೊರನಡೆದರು.
ರಾಜ್ಯಪಾಲರ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಹರಿಪ್ರಸಾದ್ ಮತ್ತು ಇತರ ಕಾಂಗ್ರೆಸ್ ನಾಯಕರು, ಅವರನ್ನು ತಡೆಯಲು ಪ್ರಯತ್ನಿಸಿದರು, ಆದರೆ ರಾಜ್ಯಪಾಲರು ಅದಕ್ಕೆ ಸ್ಪಂದಿಸದೆ ನಿರ್ಗಮಿಸಿದರು.
ಸರ್ಕಾರ ಕೊಟ್ಟಂತಹ ಭಾಷಣವನ್ನು ಓದದೇ ಕೇವಲ 2 ಸಾಲಿನಲ್ಲಿ ಮಾತು ಮುಗಿಸಿ, ಶುಭ ಕೋರಿ ಗೆಹ್ಲೋಟ್ ಅವರು ತೆರಳಿದ್ದಾರೆ.
ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಧಿಕ್ಕಾರ ಕೂಗಿದ್ದಾರೆ. ಬಿ.ಕೆ ಹರಿಪ್ರಸಾದ್ ಅವರು ರಾಜ್ಯಪಾಲರನ್ನು ಅಡ್ಡಗಟ್ಟಿ ಭಾಷಣವನ್ನು ಸಂಪೂರ್ಣವಾಗಿ ಓದುವಂತೆ ಆಗ್ರಹಿಸಿದ್ದಾರೆ.
ರಾಜ್ಯಪಾಲರನ್ನು ತಡೆಯುವ ವೇಳೆ ಹರಿದ B.K ಹರಿಪ್ರಸಾದ್ ಬಟ್ಟೆ
ರಾಜ್ಯಪಾಲರನ್ನು ತಡೆಯುವ ವೇಳೆ ಬಿ.ಕೆ ಹರಿಪ್ರಸಾದ್ ಬಟ್ಟೆ ಹರಿದಿದ್ದು, ಭಾರಿ ಹೈಡ್ರಾಮಾಗೆ ಕಾರಣವಾಯಿತು. ರಾಜ್ಯಪಾಲರನ್ನು ಅಡ್ಡಗಟ್ಟುವ ವೇಳೆ ಬಿ.ಕೆ ಹರಿಪ್ರಸಾದ್ ಅವರ ಕುರ್ತಾ ಕೂಡ ಹರಿದಿದೆ ಎನ್ನಲಾಗಿದೆ.ಇದಕ್ಕೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್ , ಬಿಜೆಪಿಯವರೇ ನನ್ನ ಬಟ್ಟೆ ಹರಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್ ಅಶೋಕ್ ‘ ಇದು ರಾಹುಲ್, ಸೋನಿಯಾ ಮೆಚ್ಚಿಸುವ ಕುತಂತ್ರ. ರಾಜ್ಯಪಾಲರನ್ನು ಅಟ್ಟಗಟ್ಟಿದವರನ್ನು ಸದನದಿಂದ ಹೊರ ಹಾಕಬೇಕು. ರಾಜ್ಯಪಾಲರು ಧನ್ಯವಾದ ಹೇಳಿ ಹೊರಟಿದ್ದಾರೆ..ಅದರಲ್ಲಿ ತಪ್ಪೇನು..? ಕಾಂಗ್ರೆಸ್ ನವರು ರಾಜ್ಯಪಾಲರಿಗೆ ಅಗೌರವ ತೋರಿಸಿದ್ದಾರೆ ಎಂದು ಆರ್ ಅಶೋಕ್ ಕಿಡಿಕಾರಿದರು.
ಬಿಜೆಪಿ ಕಿಡಿ
ರಾಜ್ಯಪಾಲ ಎಂಬುದು ಒಂದು ಸಾಂವಿಧಾನಿಕ ಹುದ್ದೆ. ರಾಜ್ಯಪಾಲರಿಗೆ ಗೌರವ ನೀಡುವುದು ಸಂವಿಧಾನಕ್ಕೆ ಗೌರವ ನೀಡಿದಂತೆ. ಆದರೆ ಇದಾವುದನ್ನೂ ಪರಿಗಣಿಸದೆ ಲೋಕಲ್ ರೌಡಿಯ ರೀತಿ ಆವಾಜ್ ಹಾಕಿರುವುದು ಅತ್ಯಂತ ಖಂಡನೀಯ.
ಸದನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ತಿಳಿಯದ ರೌಡಿ ಬಿ.ಕೆ. ಹರಿಪ್ರಸಾದ್ರನ್ನು ಸದನದಿಂದ ಕೂಡಲೇ ಅಮಾನತು ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಬಿಜೆಪಿ ಟ್ವೀಟ್ ನಲ್ಲಿ ಕಿಡಿಕಾರಿದೆ.




