ಗದಗ: ಮನೆಯ ತಳಪಾಯ ಅಗೆಯುವಾಗ ಸಿಕ್ಕ ಚಿನ್ನದ ನಿಧಿಯನ್ನು ಸರ್ಕಾರಕ್ಕೆ ಒಪ್ಪಿಸಿದ ಬಾಲಕ ಪ್ರಜ್ವಲ್ ರಿತ್ತಿ ಪ್ರಾಮಾಣಿಕತೆಗೆ ಮೆಚ್ಚಿ ಲಕ್ಕುಂಡಿ ಗ್ರಾಮ ಪಂಚಾಯಿತಿ ಅವರ ಕುಟುಂಬಕ್ಕೆ 30/40 ನಿವೇಶನ ಹಂಚಿಕೆ ಮಾಡಲು ನಿರ್ಣಯಿಸಿದೆ.
ಲಕ್ಕುಂಡಿಯಲ್ಲಿ ಗುರುವಾರ ನಡೆದ ವಿಶೇಷ ಗ್ರಾಮ ಸಭೆಯಲ್ಲಿ ಈ ನಿರ್ಣಯ ಕೈಗೊಂಡು, ಗ್ರಾಮದ ಮಾರುತಿ ನಗರದಲ್ಲಿ ಅವರಿಗೆ 30/40 ನಿವೇಶನ ಮಂಜೂರು ಮಾಡಲು ಹಾಗೂ ಆ ಕುಟುಂಬಕ್ಕೆ ಮನೆ ಕಟ್ಟಿಸಿಕೊಡಲು ನೆರವಾಗುವಂತೆ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲು ನಿರ್ಧರಿಸಲಾಯಿತು.
ಇದರ ಜತೆಗೆ ನಿಧಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಾಲಕನ ನಡೆ ಇತರ ಮಕ್ಕಳಿಗೂ ಸ್ಫೂರ್ತಿ ಆಗಲಿ ಎಂಬ ಉದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಶಾಲೆಗಳಲ್ಲಿ ಪ್ರಜ್ವಲ್ನ ಪ್ರಾಮಾಣಿಕತೆಯ ಕುರಿತಾದ ಪುಟ್ಟ ಬರಹದೊಂದಿಗೆ ಆತನ ಫೋಟೊ ಹಾಕಿಸುವ ನಿರ್ಧಾರವನ್ನೂ ಮಾಡಲಾಯಿತು.




