ಗದಗ : ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ಮುಂದುವರೆದಿದ್ದು, ಬಾವಿಯೊಂದರಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಶಿಲೆಗಳು ಪತ್ತೆಯಾಗಿವೆ.
ಕೆಲ ದಿನಗಳ ಹಿಂದೆ ಲಕ್ಕುಂಡಿಯ ವೀರಭದ್ರೇಶ್ವ ದೇವಾಲಯದ ಬಳಿಯಲ್ಲಿ ಮನೆ ನಿರ್ಮಾಣಕ್ಕೆ ಪಾಯ ತೆಗೆಯುತ್ತಿದ್ದಂತ ಸಂದರ್ಭದಲ್ಲಿ ಪ್ರಾಚೀನ ಬಂಗಾರ ದೊರೆತಿತ್ತು.
ಆ ಬಳಿಕ ಅದನ್ನು ಸಂರಕ್ಷಿತ ಸ್ಥಳವಾಗಿ ಪುರಾತತ್ವ ಇಲಾಖೆ ಗುರುತಿಸಿ, ಉತ್ಖನನಕ್ಕೆ ನಿರ್ಧರಿಸಿತ್ತು.ಅದರಂತೆ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ನಡೆಯತ್ತಿರುವಂತ ಉತ್ಖನನದ ವೇಳೆಯಲ್ಲಿ ಐತಿಹಾಸಿಕ ಅಪರೂಪದ ವಸ್ತುಗಳೇ ಪತ್ತೆಯಾಗುತ್ತಿವೆ.
ಲಕ್ಕುಂಡಿಯ ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯ ಮುಂದುವರೆದಿದ್ದು, 35 ಕಾರ್ಮಿಕರು ಉತ್ಖನನದ ಕೆಲಸಲ್ಲಿ ತೊಡಗಿದ್ದಾರೆ. ನೆಲದಲ್ಲಿನ ಮಣ್ಣು ತೆಗೆದಷ್ಟು ಪುರಾತನ ವಸ್ತುಗಳು, ಅಮೂಲ್ಯ ವಸ್ತುಗಳು ಪತ್ತೆಯಾಗುತ್ತಿದ್ದು, ಇಂದು ಬಾವಿಯೊಂದರಲ್ಲಿ ಕಲ್ಯಾಣ ಚಾಲುಕ್ಯರ ಶಿಲೆಗಳು ಪತ್ತೆಯಾಗಿವೆ. ಈ ಮೂಲಕ ಲಕ್ಕುಂಡಿಯ ಗತವೈಭವದ ಬಗ್ಗೆ ಶಿಲೆಗಳು ಸಾರಿ ಹೇಳುತ್ತಿವೆ.
ಈಗಾಗಲೇ ಉತ್ಖನನದ ವೇಳೆ ನಾಲ್ಕು ಬ್ಲಾಕ್ ರೀತಿಯಲ್ಲಿ ಮಣ್ಣು ತೆಗೆಯಲಾಗಿದ್ದು, ಹಲವಾರು ಪುರಾತನ ವಸ್ತುಗಳು, ಶಿವಲಿಂಗ, ನಾಗರಕಲ್ಲು, ವಿಗ್ರಹ, ದೇವಸ್ಥಾನದಂತ ಕುರುಹುಗಳು, ನವಶಿಲಾಯುಗದ ಕೈ ಕೊಡಲಿ, ಕೆಂಪು ಮಣಿ, ಟೆರ್ರಾಕೊಟಾದ ಬಿಲ್ಲೆಯಂತಹ ವಸ್ತು, ಪ್ರಾಚ್ಯ ಅವಶೇಷ ಪತ್ತೆಯಾಗಿವೆ.




