ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯಿತಿ ಹಾಗೂ ನಗರಸಭೆಯ ಸಹಯೋಗದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯ ನಿಮಿತ್ತ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರು ಹಾಗೂ ತಹಶೀಲ್ದಾರ್ ಆದ ಗೌಸಿಯಾ ಬೇಗಂ ಅವರು ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿ 1947ರ ಅಗಸ್ಟ್ 15 ರಂದು ನಮಗೆ ಸ್ವಾತ್ಯಂತ್ರ ಲಭಿಸಿದ್ದರೂ ಅನೇಕ ಗಣಗಳಾಗಿ ವಿಂಗಡವಾಗಿತ್ತು.
ನಂತರ ಎಲ್ಲಾ ಗಣಗಳನ್ನು ಒಗ್ಗೂಡಿಸಿ 1950 ಜನವರಿ 26ರಂದು ಗಣತಂತ್ರ ರಾಷ್ಟ್ರವನ್ನಾಗಿಸಲಾಗಿತು.
ದೇಶದಲ್ಲಿನ ವೈವಿದ್ಯತೆಯಲ್ಲಿನ ಏಕತೆ, ಸಮಾನತೆ ಹಿತದೃಷ್ಟಿಯಿಂದ ನಾವೆಲ್ಲರೂ ಒಗ್ಗಟ್ಟಾಗಿ ಇರುತ್ತೇವೆಂದು ಪ್ರತಿಜ್ಞೆಯನ್ನು ಮಾಡೋಣವೆಂದರು.
ಧ್ವಜವಂದನೆ ಸ್ವೀಕರಿಸಿದ ಶಾಸಕ ಬಿ.ಎಮ್.ನಾಗರಾಜ ಅವರು ಮಾತನಾಡಿ ತಾಲೂಕಿನ ಸರ್ವಾಂಗೀಣ ಅಭಿವೃದ್ದಿಗಾಗಿ ಅನೇಕ ಕಾರ್ಯಕ್ರಮಗಳ ಮುಖಾಂತರ ನಾನಾ ಇಲಾಖೆಗಳ ಹಂತ ಹಂತವಾಗಿ ಕಾಮಗಾರಿಗಳನ್ನು ಮುಗಿಸುವ ಪ್ರಯತ್ನ ನಮ್ಮ ಸರ್ಕಾರದ ವತಿಯಿಂದ ಮಾಡುತ್ತಿದ್ದೇವೆ.
ತುಂಗಾಭದ್ರ ಜಲಾಶಯದ ಭವಿಷ್ಯದ ಭದ್ರತೆಗೆಗಾಗಿ ಎರಡನೇ ಬೆಳೆಯ ತ್ಯಾಗ ಮಾಡಿ ಸಹಕರಿಸಿದ ರೈತರಿಗೆ ಜೂನ್ ಇಲ್ಲವೇ ಜುಲೈ ತಿಂಗಳಲ್ಲಿ ತುಂಗಾಭದ್ರ ಜಲಾಶಯದ ಗೇಟ್ ಅಳವಡಿಕೆಯ ಕಾರ್ಯ ಮುಗಿಸಿ ನೀರಾವರಿ ಅನುಕೂಲ ಮಾಡಿಕೊಡಲಾಗುವುದೆಂದು ತಿಳಿಸಿದರು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಸ್ಕೌಟ್ಸ್ ಮತ್ತು ಟ್ರೂಪ್ ಹಾಗೂ ಪೌರ ಕಾರ್ಮಿಕರಿಂದ ಪಥ ಸಂಚಲನ ಜರುಗಿತು.
ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳ ನೃತ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಭಾಗಿಯಾದ ವಿದ್ಯಾರ್ಥಿಗಳ ತಂಡಕ್ಕೆ ಪುರಸ್ಕರಿಸಲಾಯಿತು.
ಪಥಸಂಚಲನದಲ್ಲಿ ವಿಜೇತವಾದ ತಂಡಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಹಾನ್ ವ್ಯಕ್ತಿಗಳ ವೇಷದಲ್ಲಿನ ಪುಟಾಣಿ ವಿದ್ಯಾರ್ಥಿಗಳು ನೆರೆದವರ ಗಮನ ಸೆಳೆದರು.
ಇದೇ ವೇಳೆ ಪೋಲೀಸ್ ಉಪಾಧೀಕ್ಷಕ ಮಾಲತೇಶ ಕೂನಬೇವ, ಪೌರಾಯುಕ್ತ ಗಂಗಾಧರ, ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕ ವರ್ಗ ಸೇರಿದಂತೆ ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ.




