ತುಮಕೂರು : ಕ್ಯಾತಸಂದ್ರ ಬಳಿಯಿರುವ ಪ್ರಸಿದ್ಧ ಸಿದ್ದಗಂಗಾ ಮಠದ ಜಾತ್ರಾ ಮಹೋತ್ಸವದ ಹಿನ್ನೆಲೆ, ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಭಿಕ್ಷಾಟನೆ ನಡೆಸಿದರು.
ತುಮಕೂರು ನಗರದ ಬಟವಾಡಿ ಸಮೀಪದ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಸ್ವಾಮೀಜಿಗಳು, ಮಠದ ಜಾತ್ರಾ ಮಹೋತ್ಸವಕ್ಕಾಗಿ ವಾಡಿಕೆಯಂತೆ ಭಿಕ್ಷೆ ಸಂಗ್ರಹಿಸಿದರು.
ಪ್ರತಿ ವರ್ಷವೂ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಿದ್ದಗಂಗಾ ಮಠದಿಂದ ಭಿಕ್ಷಾಟನೆ ಮಾಡುವ ಪರಂಪರೆ ನಡೆದು ಬಂದಿದ್ದು, ಅದೇ ರೀತಿಯಲ್ಲಿ ಈ ವರ್ಷವೂ ಸ್ವಾಮೀಜಿಗಳು ಭಿಕ್ಷಾಟನೆ ಕೈಗೊಂಡಿದ್ದಾರೆ.
ಭಿಕ್ಷಾಟನೆಯ ವೇಳೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ರಾಗಿ, ಹುಣಸೆ ಹಣ್ಣು, ವಿವಿಧ ಕಾಳುಗಳು, ಮೆಣಸಿನಕಾಯಿ, ತೆಂಗಿನಕಾಯಿ ಸೇರಿದಂತೆ ದಿನಸಿ ವಸ್ತುಗಳನ್ನು ಹಾಗೂ ದೇಣಿಗೆಯನ್ನು ಸಮರ್ಪಿಸಿದರು. ಮಠದ ಸೇವಾ ಕಾರ್ಯಗಳಿಗೆ ಸಹಕಾರ ನೀಡುವ ಉದ್ದೇಶದಿಂದ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.




