ಚೆನ್ನೈ: ಚೆನ್ನೈ ನಲ್ಲಿ ಪೌರಕಾರ್ಮಿಕ ಮಹಿಳೆಯೊಬ್ಬರು ಕಸದ ಬುಟ್ಟಿಯಲ್ಲಿ ಸಿಕ್ಕ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದ ವಿಚಾರ ಭಾರಿ ಸುದ್ದಿಯಾಗಿತ್ತು. ಪೌರಕಾರ್ಮಿಕ ಮಹಿಳೆ ಎಸ್.ಪದ್ಮಾ ಅವರ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.ಇದೀಗ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಪದ್ಮಾ ಅವರ ಪ್ರಾಮಾಣಿಕತೆಗೆ ಬೆರಗಾಗಿದ್ದಾರೆ.
ಪೌರಕಾರ್ಮಿಕ ಮಹಿಳೆ ಎಸ್.ಪದ್ಮಾ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಕಳೆದ ತಿಂಗಳು ಕಸದ ಬುಟ್ಟಿಯಲ್ಲಿ ಸಿಕ್ಕ 45 ಲಕ್ಷ ಮೌಲ್ಯದ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರು.
ಪದ್ಮಾ ಅವರ ಕಾರ್ಯವನ್ನು ಮೆಚ್ಚಿರುವ ನಟ ಸೂಪರ್ ಸ್ಟಾರ್ ರಜನಿಕಾಂತ್, ಪದ್ಮಾ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಅವರಿಗೆ ದುಬಾರಿ ಉಡುಗೊರೆ ನೀಡಿದ್ದಾರೆ. ಚಿನ್ನದ ಸರವನ್ನು ನೀಡಿ ಗೌರವಿಸಿದ್ದಾರೆ.
ರಜನಿಕಾಂತ್ ಭೇಟಿ ಬಳಿಕ ಮಾತನಾಡಿರುವ ಪದ್ಮಾ, ರಜನಿಕಾಂತ್ ಅವರನ್ನು ನಾನು ಭೇಟಿಯಾಗುತ್ತೇನೆ ಎಂಬ ನಿರೀಕ್ಷೆ ಕೂಡ ಇರಲಿಲ್ಲ. ನನಗೆ ರೋಮಾಂಚನವಾಯಿತು. ರಜನಿಕಾಂತ್ ಭೇಟಿಯಾಗಿದ್ದು ತುಂಬಾ ಖುಷಿ ತಂದಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಪದ್ಮಾ ಅವರ ಪ್ರಾಮಾಣಿಕತೆಗೆ ಶ್ಲಾಘನೆ ವ್ಯಕ್ತಪಡಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, 1 ಲಕ್ಷ ರೂಪಾಯಿ ಚೆಕ್ ನೀಡಿದ್ದರು.




