ಬೆಳಗಾವಿ: ಸಿಗರೇಟ್ ವಿಚಾರವಾಗಿ ನಾಲ್ವರು ಯುವಕರು ಹಾಗೂ ಅಂಗಡಿ ಮಾಲೀಕನ ನಡುವೆ ಮಾತಿಗೆ ಮಾತು ಬೆಳೆದಿದೆ. ಗಲಾಟೆಯಲ್ಲಿ ಯುವಕರ ಗುಂಪು ಅಂಗಡಿ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.ಗಂಭೀರವಾಗಿ ಹಲ್ಲೆಗೊಳಗಾದ ಅಂಗಡಿ ಮಾಲೀಕ ಆಸ್ಪತ್ರೆಗೆ ದಾಖಲಾಗುವ ಮೊದಲೇ ಪ್ರಾಣ ಬಿಟ್ಟಿದ್ದಾನೆ.
ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೊಡಕೆನಟ್ಟಿ ಗ್ರಾಮದ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಕೊಲೆಯಾದ ವ್ಯಕ್ತಿ. ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ್ (22) ನಿಖಿಲ್ ಮಹೇಶ್ ಚೌಗಲೆ (22) ವಿವೇಕ್ ರಾಜೇಂದ್ರ ಚೌಗುಲೆ (22) ಮತ್ತು ಶ್ರೀಧರ್ ರತನ ಪಾಟಿಲ್ (21) ಎಂಬುವವರು ಯಲ್ಲಪ್ಪನ ಅಂಗಡಿಗೆ ಬಂದು ಸಿಗರೇಟ್ ತೆಗೆದುಕೊಂಡಿದ್ದಾರೆ. ಆದರೆ ಹಣ ನೀಡಿಲ್ಲ. ಅಂಗಡಿ ಮಾಲೀಕ ಯುವಕರಿಗೆ ಸಿಗರೇಟ್ ಹಣ ನೀಡಲು ಕೇಳಿದ್ದಕ್ಕೆ ಗಲಾಟೆ ಮಾಡಿ ಯಲ್ಲಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ.
ಗಂಭೀರವಾಗಿ ಹಲ್ಲೆಗೊಳಗಾದ ಮಾಲೀಕ ಯಲ್ಲಪ್ಪನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಮಾರ್ಗ ಮಧ್ಯೆಯೇ ಯಲ್ಲಪ್ಪ ಕೊನೆಯುಸಿರೆಳೆದಿದ್ದಾರೆ.
ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಬಳಿಕ ಪರಾರಿಯಾಗಿದ್ದ ನಾಲ್ವರು ಯುವಕರನ್ನು ಪೊಲೀಸರು ಪತ್ತೆಮಾಡಿ ಬಂಧಿಸಿದ್ದಾರೆ.




