ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಜೀವಿತ ಪ್ರಮಾಣ ಪತ್ರ(ಲೈಫ್ ಸರ್ಟಿಫಿಕೇಟ್) ಕೊಡಬೇಕು ಎನ್ನುವ ಹೊಸ ನಿಯಮ ಜಾರಿಗೊಳಿಸಲು ಸರ್ಕಾರ ಮುಂದಾಗಿರುವುದಕ್ಕೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸರ್ಕಾರ ಬಂದ ಮೇಲೆ ಎರಡು ಲಕ್ಷ ಕೋಟಿ ರೂ.ಸಾಲ ಮಾಡಿದೆ. ಈ ಬಜೆಟ್ ಗೆ ಸಾಲದ ಮೊತ್ತ ಮೂರು ಲಕ್ಷ ಕೋಟಿ ರೂ. ಆಗಲಿದೆ. ಅವರ ಬಳಿ ಹಣವಿಲ್ಲದ ಕಾರಣ ಈಗಾಗಲೇ ಪಡಿತರ ಚೀಟಿಗಳನ್ನು ರದ್ದು ಮಾಡುತ್ತಿದ್ದಾರೆ.
ಈಗ ಗ್ಯಾರಂಟಿ ಯೋಜನೆಗಳನ್ನು ಕಡಿತ ಮಾಡಲು ಮುಂದಾಗಿದ್ದಾರೆ. ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಲೈಫ್ ಸರ್ಟಿಫಿಕೇಟ್ ಕೊಡಬೇಕು ಎನ್ನುವ ನಿಯಮ ಜಾರಿಗೊಳಿಸಲು ಮುಂದಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫುಟ್ಪಾತ್ ವ್ಯಾಪಾರಿಗಳ ರೇಷನ್ ಕಾರ್ಡ್ ಕೂಡ ರದ್ದು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ತುಘಲಕ್ ಸರ್ಕಾರವಾಗಿದೆ.
ಇದು ಪಾಪರ್ ಸರ್ಕಾರ. ಇನ್ನು ಮುಂದೆ ಎಲ್ಲಾ ಯೋಜನೆಗಳನ್ನು ಕಡಿತಗೊಳಿಸಿ ಬಡವರ ವಿರೋಧಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.




