ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ಎಂದೇ ಕರೆಯಲ್ಪಡುವ ವಿಧಾನಸೌಧದಲ್ಲಿ ಅಚ್ಚರಿಯ ಕಳ್ಳತನವೊಂದು ನಡೆದಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲೇ ಬರೋಬ್ಬರಿ 300 ಗ್ರಾಂ ಚಿನ್ನಾಭರಣ ಮತ್ತು 1.50 ಲಕ್ಷ ರೂಪಾಯಿ ನಗದು ಇದ್ದ ಕೈಚೀಲವನ್ನು ಕಳವು ಮಾಡಿದ್ದ ಡಿ-ಗ್ರೂಪ್ ನೌಕರನನ್ನು ಪೊಲೀಸರು ಬಂಧಿಸಿದ್ದಾರೆ.
ನವೀನ್ ಎಂಬುವವರು ಕೆಲಸದ ನಿಮಿತ್ತ ಸಚಿವ ಭೈರತಿ ಸುರೇಶ್ ಅವರ ಕಚೇರಿಗೆ ಬಂದಿದ್ದರು. ಈ ವೇಳೆ ಅವರ ಬಳಿ 300 ಗ್ರಾಂ ಚಿನ್ನದ ಒಡವೆಗಳು ಹಾಗೂ 1.50 ಲಕ್ಷ ರೂ. ನಗದು ಇದ್ದ ಕೈಚೀಲವಿತ್ತು.ಕೆಲಸದ ಅವಸರದಲ್ಲಿ ಸಚಿವರ ಕಚೇರಿಯಲ್ಲೇ ತಮ್ಮ ಕೈಚೀಲವನ್ನು ಮರೆತು ನವೀನ್ ವಾಪಸ್ ಹೋಗಿದ್ದರು.
ಮಾರನೇ ದಿನ ನವೀನ್ ಅವರಿಗೆ ಬ್ಯಾಗ್ ನೆನಪಾಗಿ ಕಚೇರಿಗೆ ಬಂದು ನೋಡಿದಾಗ ಕೈಚೀಲ ನಾಪತ್ತೆಯಾಗಿತ್ತು. ಇದರಿಂದ ಗಾಬರಿಗೊಂಡ ಅವರು ತಕ್ಷಣ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಸಚಿವರ ಕಚೇರಿ ಮತ್ತು ಸುತ್ತಮುತ್ತಲಿನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯಾಂಶ ಹೊರಬಂದಿದೆ. ಡಿಪಿಎಆರ್ (DPAR) ವಿಭಾಗದ ಡಿ-ಗ್ರೂಪ್ ನೌಕರನೊಬ್ಬ ಈ ಕೈಚೀಲವನ್ನು ಗುಟ್ಟಾಗಿ ಹೊತ್ತೊಯ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿಸಿಟಿವಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಳ್ಳತನ ಮಾಡಿದ್ದ ಡಿ-ಗ್ರೂಪ್ ನೌಕರನನ್ನು ಬಂಧಿಸಿ, ಕಳವಾಗಿದ್ದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ವಿಧಾನಸೌಧದಂತಹ ಹೈ-ಸೆಕ್ಯೂರಿಟಿ ವಲಯದಲ್ಲಿ ಸಚಿವರ ಕಚೇರಿಯಲ್ಲೇ ಕಳ್ಳತನ ನಡೆದಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.




