ಬೆಂಗಳೂರು : ಅಂತಿಮವಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಮೈಸೂರು ರೇಷ್ಮೆ ಸೀರೆ ಉಟ್ಟು ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮನ್ನಾ ಭಾಟಿಯಾ ರಾಯಭಾರಿಯಾಗಿರುವ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ವಿವಿಧ ಪತ್ರಿಕೆಗಳಲ್ಲಿ ಮಂಗಳವಾರ ಪ್ರಕಟವಾಗಿದೆ.
ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ ರಾಯಭಾರಿಯಾಗಿ ತಮನ್ನಾ ಭಾಟಿಯಾ ನೇಮಕ ವಿಚಾರವೇ ಬಹಳ ಚರ್ಚೆಗೆ ಕಾರಣವಾಗಿತ್ತು. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸರ್ಕಾರ ಅವರನ್ನೇ ಅಂತಿಮಗೊಳಿಸಿತ್ತು.
ಮಂಗಳವಾರ ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತು ನೋಡಿದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಕರ್ನಾಟಕದ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಖಾತೆ ಸಚಿವ ಎಂ.ಬಿ.ಪಾಟೀಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ‘ಶತಮಾನಕ್ಕೂ ಮೀರಿದ ಪರಂಪರೆ, ಭವಿಷ್ಯವನ್ನೇ ಗುರಿಯಾಗಿಟ್ಟ ದೃಢ ಸಂಕಲ್ಪ! ನಾಲ್ವಡಿ ಕೃಷ್ಣರಾಜ ಒಡೆಯರ್- ಸರ್ ಎಂ. ವಿಶ್ವೇಶ್ವರಯ್ಯ ಮುಂತಾದ ಮಹನೀಯರ ದೂರದೃಷ್ಟಿಯಿಂದ ಹುಟ್ಟಿದ ಕೆ.ಎಸ್.ಡಿ.ಎಲ್ ಇಂದು ಹೊಸ ಯುಗಕ್ಕೆ ಕಾಲಿಡುತ್ತಿದೆ’ ಎಂದು ಹೇಳಿದ್ದಾರೆ.
‘ಮೈಸೂರು ಸ್ಯಾಂಡಲ್ ಸೋಪ್ ಗೆ ನವೀನ ರೂಪ, ಉತ್ತರ ಭಾರತವನ್ನೂ ಮತ್ತಷ್ಟು ವ್ಯಾಪಕವಾಗಿ ತಲುಪುವ ಮಹತ್ವಾಕಾಂಕ್ಷೆಯೊಂದಿಗೆ ಖ್ಯಾತ ನಟಿ ತಮನ್ನಾ ಭಾಟಿಯಾ ಪ್ರಚಾರ ರಾಯಭಾರಿಯಾಗಿ ನೇಮಕ. ಡಿಜಿಟಲ್ ಮಾರುಕಟ್ಟೆ, ರಫ್ತು ವಿಸ್ತರಣೆ-ಎಲ್ಲವನ್ನೂ ಒಟ್ಟುಗೂಡಿಸಿ 2030ರ ಹೊತ್ತಿಗೆ ₹5,000 ಕೋಟಿ ವಹಿವಾಟಿನ ಗುರಿ. ಕರ್ನಾಟಕದ ಸರ್ಕಾರಿ ಸಂಸ್ಥೆ, ರಾಷ್ಟ್ರಮಟ್ಟದ ಬ್ರ್ಯಾಂಡ್ ಆಗುವ ದಿಟ್ಟ ಹೆಜ್ಜೆ’ ಎಂದು ತಿಳಿಸಿದ್ದಾರೆ.




