ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿರುವ ವಿಸ್ಟಂ ಪಬ್ಲಿಕ್ ಶಾಲೆಯಲ್ಲಿ ನಡೆದ ದುರಂತ ಘಟನೆ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ.
ಶಾಲಾ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿ ಎಲ್.ಕೆ.ಜಿ. ವಿದ್ಯಾರ್ಥಿ ಪುನೀತ (4) ಮೃತಪಟ್ಟಿರುವುದು ಅತ್ಯಂತ ದುಃಖದಾಯಕ ಹಾಗೂ ನಿರ್ಲಕ್ಷ್ಯಪೂರ್ಣ ಘಟನೆ ಆಗಿದೆ.
ಲಭ್ಯ ಮಾಹಿತಿಯ ಪ್ರಕಾರ, ಶಾಲಾ ವಾಹನದಲ್ಲಿ ಕ್ಲೀನರ್ ಇಲ್ಲದೆ ಚಾಲಕ ಒಬ್ಬನೇ ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದನು.
ಬಾಲಕನನ್ನು ಇಳಿಸಿದ ನಂತರ ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದ ಕಾರಣ ಈ ದುರ್ಘಟನೆ ಸಂಭವಿಸಿದೆ.
ಇದು ಶಾಲಾ ಆಡಳಿತ ಮಂಡಳಿಯ ಗಂಭೀರ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಮಕ್ಕಳ ಸುರಕ್ಷತೆ ಅತ್ಯಂತ ಮುಖ್ಯವಾದ ವಿಷಯವಾಗಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಕೆಬಿ ವಾಸು ಪತ್ರಿಕಾ ಪ್ರಕಟಣೆ ಮೂಲಕ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಶಾಲೆಯ ವಿರುದ್ಧ ಕಠಿಣ ಕ್ರಮಗಳನ್ನು ನಡೆಸಲು ಸೂಚಿಸಿದರು.
ವಿಸ್ಟಂ ಪಬ್ಲಿಕ್ ಶಾಲೆಯ ಮಾನ್ಯತೆಯನ್ನು ತಾತ್ಕಾಲಿಕವಾಗಿ ಅಮಾನತು / ರದ್ದುಪಡಿಸುವುದು.
ಶಾಲಾ ಆಡಳಿತ ಮಂಡಳಿ ವಿರುದ್ಧ ಸಮಗ್ರ ತನಿಖೆ ನಡೆಸುವುದು.
ಹೊಣೆಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು.
ಮೃತ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ರೂ. 25 ಲಕ್ಷ ಪರಿಹಾರ ನೀಡುವುದು.
ಶಾಲಾ ಆಡಳಿತ ಮಂಡಳಿಯಿಂದ ರೂ. 25 ಲಕ್ಷ ಪರಿಹಾರ ಕಡ್ಡಾಯವಾಗಿ ನೀಡುವಂತೆ ಆದೇಶಿಸುವುದು.
ಜಿಲ್ಲೆಯ ಎಲ್ಲಾ ಖಾಸಗಿ ಶಾಲಾ ವಾಹನಗಳ ಸುರಕ್ಷತಾ ಪರಿಶೀಲನೆ ನಡೆಸುವುದು.
ಮೃತ ಬಾಲಕನ ಕುಟುಂಬಕ್ಕೆ ನ್ಯಾಯ ದೊರಕಿಸುವುದು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದು ಆಡಳಿತದ ನೈತಿಕ ಜವಾಬ್ದಾರಿಯಾಗಿದೆ.
ಗಂಭೀರವಾಗಿ ಪರಿಗಣಿಸಿ ತಕ್ಷಣ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸುತ್ತೇವೆ ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ವರದಿ ವೆಂಕಟಪ್ಪ ಕೆ ಸುಗ್ಗಾಲ್.




