ಚೇಳೂರು: ಚುನಾವಣಾ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿ ಆಯೋಗ ಮತ್ತು ಕ್ಷೇತ್ರದ ಜನತೆಗೆ ವಂಚಿಸಿರುವ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅವರು ಶಾಸಕರಾಗಿ ಅನುಭವಿಸಿದ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ವಾಪಸ್ ಪಡೆಯಬೇಕು ಎಂದು ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಯ್ಯಾರೆಡ್ಡಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಚೇಳೂರು ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಅಸಿಂಧುಗೊಳಿಸಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪನ್ನು ಪಕ್ಷವು ಮುಕ್ತಕಂಠದಿಂದ ಸ್ವಾಗತಿಸುತ್ತದೆ ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಮುಖಂಡ ಎಂ.ಬಿ. ಬೈರಾರೆಡ್ಡಿ, ಬಡ ಜನತೆಯನ್ನೇ ಬಂಡವಾಳ ಮಾಡಿಕೊಂಡು ಆಸ್ತಿ ಮಾಡಿಕೊಂಡಿರುವ ವ್ಯವಸ್ಥೆಯನ್ನು ಮತದಾರರು ತಿರಸ್ಕರಿಸಬೇಕು. ಇಂತಹ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಪಕ್ಷಕ್ಕೂ ಮುಜುಗರ ಮತ್ತು ತಕ್ಷಣವೇ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ಮುಖಂಡ ಗೊಲ್ಲಹಳ್ಳಿ ಮಂಜುನಾಥ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರದಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡುವ ಸಂಸ್ಕೃತಿಯನ್ನು ಸುಬ್ಬಾರೆಡ್ಡಿ ಅವರೇ ತಂದಿದ್ದು, ಸಮಾಜ ಸೇವೆಯ ಸೋಗಿನಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.
ಇವರ ಹಾದಿಯಲ್ಲೇ ಬಿಜೆಪಿ ಮುಖಂಡ ಸಿ. ಮುನಿರಾಜು ಕೂಡ ಆಮಿಷಗಳ ರಾಜಕಾರಣ ಮಾಡುತ್ತಿದ್ದಾರೆ ಹೊರತು ಯಾವುದೇ ನೈಜ ಅಭಿವೃದ್ಧಿ ಮಾಡಿಲ್ಲ. ಕಳೆದ 13 ವರ್ಷಗಳಿಂದ ಕ್ಷೇತ್ರವು ಅಭಿವೃದ್ಧಿ ಶೂನ್ಯವಾಗಿದೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಂಜುನಾಥ, ಎಸ್.ಎನ್.ಸುಬ್ಬಿರೆಡ್ಡಿ, ಉತ್ತಪ್ಪ, ನಾರಾಯಣಸ್ವಾಮಿ, ಕೆ.ವಿ.ಕೃಷ್ಣಪ್ಪ, ಲಕ್ಷ್ಮೀನಾರಾಯಣ, ಅಶ್ವತ್ಥಪ್ಪ ಮತ್ತು ಬಾಷಾ ಸಾಬಿ ಉಪಸ್ಥಿತರಿದ್ದರು.
ವರದಿ :ಯಾರಬ್. ಎಂ.




