ಸುನೀಲ ವೆರ್ಣೇಕರ ಅವರಿಂದ ಎಸ್.ಎಸ್.ಎಲ್.ಸಿ ಟಾಪರ್ ಪೃಥ್ವಿ ಗರಗದ ಇವರಿಗೆ ಸೈಕಲ್ ಬಹುಮಾನ
ಬೈಲಹೊಂಗಲ: ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿಗಳಾಗಿ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಅಂಚಟಗೇರಿ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ಎಂ.ಎಸ್. ಶಿವಳ್ಳಿಮಠ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಅನೇಕ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಸಾಧನೆ ಮಾಡಿದ ಮಹನೀಯರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕು. ನಿರಂತರ ಪ್ರಯತ್ನದಿಂದ ಗುರಿ ತಲುಪಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಒಳ್ಳೆಯ ಫಲಿತಾಂಶ ಬರುವುದರಲ್ಲಿ ಎರಡು ಮಾತಿಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಅಗಮಿಸಿದ ಉದ್ಯಮಿಗಳಾದ ಸುನೀಲ ವೆರ್ಣೇಕರ ಸನ್ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಯ ಟಾಪರ್ ಗಳಿಗೆ ಸೈಕಲ್, ಸ್ಮಾರ್ಟ್ ವಾಚ್, ಬ್ಯಾಗ್, ನೋಟ್ ಪುಸ್ತಕ ಮತ್ತು ಟ್ರೋಫಿಗಳನ್ನು ಬಹುಮಾನವಾಗಿ ವಿತರಿಸಿದರು. ಮಕ್ಕಳಿಗೆ ಹೆತ್ತವರ ತ್ಯಾಗ, ಕಾಳಜಿಯ ಬಗ್ಗೆ ಅರಿವಿರಬೇಕು. ಸಮಯ ವ್ಯರ್ಥ ಮಾಡದೇ ಓದಿನ ಕಡೆ ಗಮನ ಹರಿಸಿಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಶಿಕ್ಷಕ ಎನ್.ಆರ್.ಠಕ್ಕಾಯಿ ಮಾತನಾಡಿ ಮಕ್ಕಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜದಲ್ಲಿ ಸಾರ್ಥಕ ಜೀವನ ನಡೆಸಬೇಕು ಎಂದರು. ಎಸ್.ಎಸ್.ಎಲ್ ಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಹೆಚ್ಚು ಮೌಲ್ಯದ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುವ ಸುನೀಲ ವೆರ್ಣೇಕರ ಅವರ ಶೈಕ್ಷಣಿಕ ಕಾಳಜಿ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತಿರುವ ಎಲ್ಲ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ನಿವೃತ್ತ ಶಿಕ್ಷಕ ಎಂ.ಬಿ.ಹೊಂಗಲ ಮಾತನಾಡಿದರು. ಎಸ್.ಡಿ.ಎಂ.ಸಿ ಸದಸ್ಯರಾದ ರಾಮು ಮೆಕ್ಕೇದ ಶಾಲೆಗೆ ಸೌಂಡ್ ಸಿಸ್ಟಮ್ ದೇಣಿಗೆ ನೀಡಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವಿನಾಯಕ ಬಡಿಗೇರ, ಸದಸ್ಯರಾದ ದುಂಡಪ್ಪ ಮಡಿವಾಳರ, ರವೀಂದ್ರ ಮನಗುತ್ತಿ, ಯಲ್ಲಪ್ಪ ಕುರಿ, ಮಂಜುಳಾ ಕುಲಕರ್ಣಿ, ಗ್ರಾಮದ ಹಿರಿಯರಾದ ಚನಬಸಯ್ಯ ಮಠದ, ಮಲ್ಲಪ್ಪ ಹೊಂಗಲ, ಈರಪ್ಪ ಗರಗದ, ಬಸಪ್ಪ ಸೊಗಲದ, ದೇಮಪ್ಪ ಜೋಗಿಗುಡ್ಡ, ಮಂಜುನಾಥ ಗುಡ್ಡದ, ಶಿಕ್ಷಕರಾದ ಪ್ರವೀಣ ಗುರುನಗೌಡರ, ವೀರೇಂದ್ರ ಪಾಟೀಲ, ಹೇಮಲತಾ ಪುರಾಣಿಕ, ಮಂಜುಳಾ ಕಾಳಿ, ಸಂತೋಷ ಸಾಳುಂಕೆ, ಪ್ರಾಥಮಿಕ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಜಗದೀಶ ನರಿ ಸ್ವಾಗತಿಸಿದರು. ಶಿವಾನಂದ ಬಳಿಗಾರ ನಿರೂಪಿಸಿದರು.
ವರದಿ :ದುಂಡಪ್ಪ ಹೂಲಿ




