ಕಾಳಗಿ:ಕ್ರೈ ಸಂಸ್ಥೆಯ ವತಿಯಿಂದ ಎರಡನೇ ಹಂತದ ತಾಲೂಕು ಮಟ್ಟದ ಪಾಲುದಾರರ ತರಬೇತಿ ಕಾರ್ಯಕ್ರಮವು ಕಾಳಗಿ ಪ್ರವಾಸಿ ಮಂದಿರದಲ್ಲಿ ಜರುಗಿತು. ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಾಳಗಿ ವೈದ್ಯಾಧಿಕಾರಿ ಡಾ. ಅಂಬರೀಶ್ ಅವರು ನವಜಾತ ಶಿಶುಗಳ ಆರೈಕೆ ಕುರಿತು ಮಾತನಾಡಿದರು. ಹುಟ್ಟಿದ ತಕ್ಷಣ ತಾಯಿಯ ಎದೆಹಾಲು (ಕೊಲೋಸ್ಟ್ರಮ್) ನೀಡುವ ಮಹತ್ವ, ಆರು ತಿಂಗಳವರೆಗೆ ಕೇವಲ ಎದೆಹಾಲಿನ ಪೋಷಣೆಯ ಅಗತ್ಯತೆ ಹಾಗೂ ಸ್ವಚ್ಛತೆ ಮತ್ತು ನಿಯಮಿತ ರೋಗನಿರೋಧಕ ಲಸಿಕೆಗಳ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗ್ರೇಡ್–2 ರಾಜೇಶ್ವರಿ ಉದ್ಘಾಟಕರಾಗಿ ಉಪಸ್ಥಿತರಿದ್ದರು. ಕಾಳಗಿ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ಟೇಬಲ್ ಈರಣ್ಣ ಹಾಗೂ ಶ್ರೀಶೈಲ್, ಕ್ರೈ ಸಂಸ್ಥೆಯ ಸಿಬ್ಬಂದಿಗಳಾದ ಶ್ವೇತಾ, ಪೂಜಾ, ಶಿಲ್ಪಾ, ನರಸಿಂಹರಾವ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಪಾಲಕರು, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಶಾಲಾ SDMC ಸದಸ್ಯರು ಭಾಗವಹಿಸಿದ್ದರು.
ವರದಿ : ಹಣಮಂತ ಕುಡಹಳ್ಳಿ




