ಹಾವೇರಿ: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಸ್.ಎಸ್.ಎಲ್.ಸಿ. ಮಾರ್ಚ್ 18ರಿಂದ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳನ್ನು ಓದಿನತ್ತ ಪ್ರೇರೇಪಿಸುವ ಕೆಲವನ್ನು ಮಾಡಲಾಗುತ್ತಿದೆ. ಈ ನಡುವೆ ಪರೀಕ್ಷಾ ಭೀತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ವಸತಿ ಶಾಲೆಯ ಕಾಂಪೌಂಡ್ ಹಾರಿ ಪರಾರಿಯಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಪರೀಕ್ಷೆ ಬಗ್ಗೆ ಮಕ್ಕಳು ಆತಂಕಕ್ಕೆ ಒಳಗಾಗಬಾರದು ಎಂದು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ನಡೆಯುತ್ತಿದೆ.
ಹಾಗಿದ್ದರೂ ಹತ್ತನೇ ತರಗತಿ ಪರೀಕ್ಷೆಗೆ ಹೆದರಿ ಮೊರಾರ್ಜಿ ವಸತಿ ಶಾಲೆಯ 5 ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಆತಂಕಕಾರಿ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಸುಣಕಲಬಿದರಿ ವಸತಿ ಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳು ಪರೀಕ್ಷೆಗೆ ಭಯಪಟ್ಟು ಹಾಸ್ಟೆಲ್ ಕಾಂಪೌಂಡ್ ಹಾರಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯನ್ನು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಚ್ಚಿಟ್ಟಿರುವ ಆರೋಪ ಕೇಳಿಬಂದಿದೆ. ಮಕ್ಕಳು ಇದ್ದಾರೆ, ಸಿಕ್ಕಿದ್ದಾರೆ ಎಂದು ವಸತಿ ಶಾಲೆಯವರು ಹೇಳುತ್ತಿದ್ದು, ಅವರು ಬೇರೆಡೆ ಇದ್ದಾರೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ರಾತ್ರಿ ವೇಳೆ ವಾಚ್ಮೆನ್ ಇಲ್ಲದಿರುವುದನ್ನು ಗಮನಿಸಿದ್ದ ವಿದ್ಯಾರ್ಥಿಗಳು, ಇಂದು ಬೆಳಗಿನಜಾವ ವಸತಿ ಶಾಲೆ ಕಾಂಪೌಂಡ್ ಹಾರಿ ಪರಾರಿಯಾಗಿದ್ದಾರೆ. ಶಾಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯುತ್ತಿದ್ದ ಕಾರಣಕ್ಕೆ ಪರೀಕ್ಷೆಗೆ ಹೆದರಿ ಶಾಲೆಯಿಂದ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.




