Ad imageAd image

ಪ್ರೇಯಸಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕೊಲೆ : ದುಷ್ಟ ಅರೆಸ್ಟ್ 

Bharath Vaibhav
ಪ್ರೇಯಸಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಕೊಲೆ : ದುಷ್ಟ ಅರೆಸ್ಟ್ 
WhatsApp Group Join Now
Telegram Group Join Now

ಗದಗ: ಇತ್ತೀಚೆಗೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹೊರವಲಯದ ಜಮೀನೊಂದರಲ್ಲಿ ನಡೆದಿದ್ದ ಯುವಕನ ಬರ್ಬರ ಹತ್ಯೆ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು.

ಇದೀಗ ಈ ಕೊಲೆ ಕೇಸ್‌ಗೆ ಸಂಬಂಧಿಸಿದಂತೆ ರಹಸ್ಯ ಭೇದಿಸುವಲ್ಲಿ ಗದಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೊಂದು ಅಚ್ಚರಿಯ ‘ಬಿಗ್ ಟ್ವಿಸ್ಟ್’ ಸಿಕ್ಕಿದೆ.

ತನ್ನ ಪ್ರೇಯಸಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಎಂಬ ಒಂದೇ ಕಾರಣಕ್ಕೆ, ಆಕೆಯ ಪ್ರಿಯಕರನೇ ಸಂಚು ರೂಪಿಸಿ ಯುವಕನನ್ನು ಕತ್ತು ಕೊಯ್ದು ಹತ್ಯೆಗೈದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮೃತ ಯುವಕನನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದ ನಿವಾಸಿ ಫಾರೂಕ್ ಸನದಿ (25 ವರ್ಷ) ಎಂದು ಗುರುತಿಸಲಾಗಿದೆ.

ಫೆಬ್ರವರಿ 28ರಂದು ಫಾರೂಕ್‌ನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ ಕೇವಲ 24 ಗಂಟೆಗಳ ಒಳಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ತ್ರಿಕೋನ ಪ್ರೇಮವೇ ಕೊಲೆಗೆ ಕಾರಣ!

ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನ ಜೀವವನ್ನು ‘ತ್ರಿಕೋನ ಪ್ರೇಮ’ ಬಲಿಪಡೆದಿದೆ. ಶಿಗ್ಲಿ ಗ್ರಾಮದ ಯುವಕ ಫಾರೂಕ್ ಸನದಿಗೆ ಕುಟುಂಬಸ್ಥರು ಹೆಣ್ಣು ಹುಡುಕಿ, ಮೂರು ತಿಂಗಳ ಹಿಂದಷ್ಟೇ ಯುವತಿಯೊಬ್ಬಳ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ (Engagement) ಮಾಡಿದ್ದರು. ಆದರೆ, ಆ ಯುವತಿಯು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ನಿವಾಸಿಯಾದ ದಾವಲಸಾಬ್ ಮಕಂದಾರ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನ ಪಾಲಾಗುತ್ತಿದ್ದಾಳೆ ಎಂಬ ವಿಚಾರ ದಾವಲಸಾಬ್‌ಗೆ ಸಹಿಸಲಾಗಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ತನ್ನ ಪ್ರೇಯಸಿಯನ್ನು ಒಲಿಸಿಕೊಳ್ಳಲು, ನಿಶ್ಚಿತಾರ್ಥ ಮಾಡಿಕೊಂಡಿದ್ದ ಫಾರೂಕ್ ಸನದಿಯನ್ನೇ ಮುಗಿಸಲು ಆತ ಖತರ್ನಾಕ್ ಸ್ಕೆಚ್ ಹಾಕಿದ್ದನು.

ಮಾತನಾಡಲು ಕರೆಸಿ ಬರ್ಬರ ಹತ್ಯೆ

ತನ್ನ ಸಂಚಿನಂತೆ ಕಾರ್ಯಪ್ರವೃತ್ತನಾದ ದಾವಲಸಾಬ್, ಫಾರೂಕ್ ಸನದಿಯನ್ನು ಮಾತನಾಡಬೇಕು ಎಂದು ನಂಬಿಸಿ ಲಕ್ಷ್ಮೇಶ್ವರದ ಹೊರವಲಯದ ಜಮೀನಿಗೆ ಕರೆಯಿಸಿಕೊಂಡಿದ್ದಾನೆ.

ಈ ವೇಳೆ ನಿಶ್ಚಿತಾರ್ಥದ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ಗಲಾಟೆ ಶುರುವಾಗಿದೆ. ವಾಗ್ವಾದ ವಿಕೋಪಕ್ಕೆ ತಿರುಗಿದಾಗ, ಮೊದಲೇ ಹೊಂಚು ಹಾಕಿ ಕುಳಿತಿದ್ದ ದಾವಲಸಾಬ್ ಹಾಗೂ ಆತನ ಸಹಚರರು ಫಾರೂಕ್‌ನ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.

ಕೋಪದ ಭರದಲ್ಲಿ ಕೊಡಲಿಯಿಂದ ಫಾರೂಕ್ ಸನದಿಯನ್ನು ಮನಬಂದಂತೆ ಕೊಚ್ಚಿ, ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿ, ನಂತರ ಯಾರಿಗೂ ಅನುಮಾನ ಬಾರದಂತೆ ಅಲ್ಲಿಂದ ಎಸ್ಕೇಪ್ ಆಗಿದ್ದರು.

24 ಗಂಟೆಯಲ್ಲೇ ಹಂತಕರನ್ನು ಬಂಧಿಸಿದ ಪೊಲೀಸರು

ಫೆಬ್ರವರಿ 28ರಂದು ಜಮೀನಿನಲ್ಲಿ ಯುವಕನ ಶವ ಪತ್ತೆಯಾದ ತಕ್ಷಣವೇ ಪೊಲೀಸರು ಅಲರ್ಟ್ ಆಗಿದ್ದರು. ಕೊಲೆ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಗದಗ ಎಸ್ಪಿ ರೋಹನ್ ಜಗದೀಶ್, ಡಿವೈಎಸ್ಪಿ ಮುರ್ತುಜ ಖಾದ್ರಿ ಹಾಗೂ ಇತರೆ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಹಂತಕರ ಪತ್ತೆಗಾಗಿ ವಿಶೇಷ ತನಿಖಾ ತಂಡಗಳನ್ನು (Special Teams) ರಚಿಸಲಾಗಿತ್ತು.

ಪೊಲೀಸರು ತಮ್ಮದೇ ಶೈಲಿಯಲ್ಲಿ ಎಲ್ಲಾ ಆಯಾಮಗಳಲ್ಲೂ ತನಿಖೆ ಚುರುಕುಗೊಳಿಸಿ, ಕೇವಲ 24 ಗಂಟೆಗಳಲ್ಲಿ ಪ್ರಮುಖ ಆರೋಪಿ ದಾವಲಸಾಬ್, ಆತನಿಗೆ ಸಾಥ್ ನೀಡಿದ್ದ ಸ್ನೇಹಿತ ಮಕ್ಕಬೂಲ್ ಸಾಬ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ, “ತನ್ನ ಹುಡುಗಿಯ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಕ್ಕೆ ಫಾರೂಕ್‌ನನ್ನು ನಾವೇ ಕೊಲೆ ಮಾಡಿದ್ದಾಗಿ” ದಾವಲಸಾಬ್ ಬಾಯ್ಬಿಟ್ಟಿದ್ದಾನೆ.

ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ

ಯಾವುದೇ ತಪ್ಪು ಮಾಡದ, ಕೇವಲ ಹಿರಿಯರು ನಿಶ್ಚಯಿಸಿದ ವಿವಾಹಕ್ಕೆ ಒಪ್ಪಿಗೆ ಸೂಚಿಸಿದ್ದ ಅಮಾಯಕ ಯುವಕ ಫಾರೂಕ್ ಇಂದು ಹೆಣವಾಗಿ ಮಲಗಿದ್ದಾನೆ. ಮದುವೆಯಾಗಿ ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಮಗನನ್ನು ಕಳೆದುಕೊಂಡ ಆತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇಡೀ ಶಿಗ್ಲಿ ಗ್ರಾಮದಲ್ಲಿ ಮೌನ ಮತ್ತು ಶೋಕದ ಮಡುವು ಆವರಿಸಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!