ಭಾಲ್ಕಿ: ಪೂಜ್ಯ ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ಮರುಪರಿಶೀಲಿಸಿ, ವಾಸ್ತವಾಂಶಗಳ ಆಧಾರದ ಮೇಲೆ ರದ್ದುಪಡಿಸಬೇಕೆಂದು ಆಗ್ರಹಿಸಿ ಭಾಲ್ಕಿ ತಾಲ್ಲೂಕಿನ ಭಕ್ತಾದಿಗಳು ಹಾಗೂ ಸಮಾಜದ ಬಾಂಧವರು ಮನವಿ ಸಲ್ಲಿಸಿದರು.
ಮನವಿಯನ್ನು ಸಿದ್ದರಾಮಯ್ಯ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ ಹಾಗೂ ಜಿ ಪರಮೇಶ್ವರ ಗೃಹ ಸಚಿವರಿಗೆ ಉದ್ದೇಶಿಸಿ ಭಾಲ್ಕಿ ತಹಸೀಲ್ದಾರ್ ಅವರ ಮುಖಾಂತರ ಸಲ್ಲಿಸಲಾಯಿತು. ಮನವಿಯಲ್ಲಿ, ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಮಠದ ಪೀಠಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಮುತ್ಯಾ ಅವರು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಯಾಗಿದ್ದು, ದಾಖಲಾಗಿರುವ ಪೋಕ್ಸೋ ಪ್ರಕರಣವು ಸಂಪೂರ್ಣವಾಗಿ ವಾಸ್ತವಾಂಶಗಳ ಆಧಾರದ ಮೇಲೆ ಮರುಪರಿಶೀಲನೆಗೊಳಪಡಿಸಬೇಕು ಎಂದು ಒತ್ತಾಯಿಸಲಾಗಿದೆ. ವೈರಲ್ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯ (ಎಫ್ ಎಸ್ ಎಲ್ ) ಮೂಲಕ ಪರಿಶೀಲಿಸಿ ನೈಜತೆ ಪತ್ತೆಹಚ್ಚಬೇಕು. ಯಾವುದೇ ಅಪರಾಧದ ಅಂಶ ಸಾಬೀತಾಗದಿದ್ದಲ್ಲಿ ಬಿ-ರಿಪೋರ್ಟ್ ಸಲ್ಲಿಸಿ ಪೋಕ್ಸೋ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಸ್ಪಷ್ಟವಾಗಿ ಆಗ್ರಹಿಸಲಾಗಿದೆ. ದುರುದ್ದೇಶಪೂರ್ವಕವಾಗಿ ವಿಡಿಯೋ ತಿರುಚಿ ಹರಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಮಗುವಿನ ಗೌಪ್ಯತೆಯನ್ನು ಕಾಪಾಡುವ ಕ್ರಮ ಕೈಗೊಳ್ಳಬೇಕು ಎಂಬುದನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ವಿಶ್ವನಾಥ್ ಬೆಳಕಟ್ಟೆ, ಸಂತೋಷ್ ನಾಟೇಕರ್, ಅಶೋಕ್ ಅಂಬಿಗರ್, ಲಾಲಪ್ಪ ಕಂದಗೋಳೆ, ಸಂತೋಷ್ ಜಮಾದಾರ್, ಸಿದ್ದು ಜಮಾದಾರ್, ಧನರಾಜ್ ಹುಗ್ಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಭಕ್ತರು ಪ್ರಕರಣದ ಕುರಿತು ನ್ಯಾಯಯುತ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತಂದು, ನಿರಪರಾಧಿಯ ಮಾನಹಾನಿ ತಪ್ಪಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ವರದಿ : ಸಂತೋಷ ಬಿಜಿ ಪಾಟೀಲ




