ತುರುವೇಕೆರೆ : ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಕೆಪಿಟಿಸಿಎಲ್ ಆವರಣದಲ್ಲಿ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಕೆಪಿಟಿಸಿಎಲ್ ಆವರಣದಲ್ಲಿ ಅಲ್ಲಿನ ಹಲವು ಸಿಬ್ಬಂದಿಗಳು ವಾಸ ಮಾಡುತ್ತಿದ್ದಾರೆ. ಈ ಆವರಣ ದೊಡ್ಡದಿರುವ ಕಾರಣ ಎಲ್ಲಾ ಕಡೆ ಹುಲ್ಲು ಬೆಳೆದಿದೆ. ಬೇಸಿಗೆ ಕಾಲವಾಗಿರುವ ಕಾರಣ ಹುಲ್ಲು ಒಣಗಿದ್ದು ಆಕಸ್ಮಿಕ ಬೆಂಕಿ ತಗುಲಿದ ಕಾರಣ ಕೆಲವೇ ಕ್ಷಣಗಳಲ್ಲಿ ಎಲ್ಲೆಡೆ ಬೆಂಕಿ ಕಾಣಿಸಿಕೊಂಡು ಅಲ್ಲಿದ್ದ ಸಿಬ್ಬಂದಿಗೆ ಭಯ ಉಂಟಾಗಿದೆ.

ಈ ಅನಾಹುತಕ್ಕೆ ವಿದ್ಯುತ್ ಲೈನ್ ಗಳಿಗೆ ಅಲ್ಲಿದ್ದ ಮರಗಳ ರೆಂಬೆ, ಕೊಂಬೆಗಳು ಸ್ಪರ್ಶಿಸಿ ಅದರಿಂದ ಉಂಟಾಗ ಬೆಂಕಿಯ ಕಿಡಿಗೆ ಈ ಅನಾಹುತ ಸಂಬಂಧಿಸಿದೆ. ವಿದ್ಯುತ್ ತಂತಿಗಳ ಮೇಲೆ ರೆಂಬೆ ಕೊಂಬೆಗಳು ಬಿದ್ದಿದ್ದರೂ ಕಂಡೂ ಕಾಣದಂತೆ ಅವುಗಳನ್ನು ಕತ್ತರಿಸಿ ಅನಾಹುತ ತಡೆಗಟ್ಟದ ಬೆಸ್ಕಾಂ ನ ನಿರ್ಲಕ್ಷ್ಯವೇ ಈ ಬೆಂಕಿ ಅವಘಡಕ್ಕೆ ಕಾರಣ ಎನ್ನಲಾಗಿದೆ.
ಬೆಂಕಿಯು ಬಹುತೇಕ ಬೆಳೆದಿದ್ದ ಎಲ್ಲಾ ಹುಲ್ಲು, ಗಿಡಗಂಟೆಗಳನ್ನು ನಾಶಪಡಿಸಿದೆ. ಬೆಂಕಿಯ ಕೆನ್ನಾಲಿಗೆ ಕೆಪಿಟಿಸಿಎಲ್ ನಲ್ಲಿದ್ದ ವಿದ್ಯುತ್ ಯಂತ್ರೋಪಕರಣಗಳಿಗೆ, ವಿದ್ಯುತ್ ಲೈನ್, ಕಂಬಗಳಿಗೆ ತಗುಲಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಕೆಪಿಟಿಸಿಎಲ್ ಆವರಣ ಮಾತ್ರವಲ್ಲದೆ ಅಕ್ಕಪಕ್ಕದ ಬಡಾವಣೆಗಳ ಮನೆಗಳಿಗೆ, ಅಂಗಡಿ ಮುಂಗಟ್ಟುಗಳಿಗೂ ಬೆಂಕಿ ತಗುಲುವ ಸಾಧ್ಯತೆ ಇತ್ತು.
ಬೆಂಕಿಯ ಅನಾಹುತ ಕಂಡ ತಕ್ಷಣವೇ ಅಲ್ಲಿನ ಕೆಲ ಸಿಬ್ಬಂದಿ ಅಗ್ನಿಶಾಮಕ ದಳದವರಿಗೆ ಕರೆ ಮಾಡಿದ್ದು, ಅಗ್ನಿಶಾಮಕದಳದ ಸಿಬ್ಬಂದಿ ತಕ್ಷಣ ಆಗಮಿಸಿ ಬೆಂಕಿ ನಂದಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬೇಸಿಗೆಯ ಬೇಗೆ ತೀವ್ರವಾಗಿದ್ದು, ವಿದ್ಯುತ್ ಲೈನ್ ಗಳಿಗೆ ಮರದ ಕೊಂಬೆಗಳು ತಗುಲದಂತೆ, ಆವರಣದಲ್ಲಿ ಒಣಗಿದ ಹುಲ್ಲಿನ ರಾಶಿಗಳು ಬೆಳೆಯದಂತೆ ಎಚ್ಚರವಹಿಸುವಂತೆ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಿಬ್ಬಂದಿಗೆ ಸೂಚಿಸಿದ್ದಾರೆ.
ವರದಿ: ಗಿರೀಶ್ ಕೆ ಭಟ್




